ಕೆ.ಆರ್.ಪೇಟೆ: ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ತಂಗುದಾಣಗಳೇ ಇಲ್ಲ. ಇದ್ದರೂ ಅವುಗಳು ದುಸ್ಥಿತಿಯಲ್ಲಿದ್ದು ಅದರೊಳಗೆ ಕುಳಿತು ಸ್ಥಿತಿಯಲ್ಲಿಲ್ಲ ಎನ್ನುವುದಕ್ಕೆ ತಾಲೂಕಿನ ಪುರ ಗ್ರಾಮದಲ್ಲಿರುವ ತಂಗುದಾಣ ಸಾಕ್ಷಿಯಾಗಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಚನ್ನರಾಯಪಟ್ಟಣ ರಸ್ತೆಯಲ್ಲಿ ಮೈಸೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಪುರ ಗ್ರಾಮದ ಪುರ ಗೇಟ್ನಲ್ಲಿರುವ ಪ್ರಯಾಣಿಕರ ತಂಗುದಾಣವು ದುಸ್ಥಿತಿಯಲ್ಲಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಶುಚಿತ್ವದಿಂದ ಕೂಡಿದೆ. ಇದರೊಳಗೆ ಹೆಜ್ಜೆ ಹಾಕುವುದಿರಲಿ ಪಕ್ಕದಲ್ಲಿ ನಿಲ್ಲಲು ಭಯಪಡುವಂತಾಗಿದೆ.
ಇಂತಹ ದುಸ್ಥಿತಿಯಲ್ಲಿರುವ ಬಸ್ ತಂಗುದಾಣವನ್ನು ತೆರವುಗೊಳಿಸಿ ಸುಸಜ್ಜಿತ ಹೊಸ ತಂಗು ಧಾಣವನ್ನು ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಾ ಬಂದಿದ್ದರೂ ಸಂಬಂಧಿಸಿದವರು ಮಾತ್ರ ಇತ್ತ ಗಮನಹರಿಸುವಂತೆ ಕಾಣಿಸುತ್ತಿಲ್ಲ. ಆದರೂ ಈ ಕೂಡಲೇ ತೆರವುಗೊಳಿಸಿ ಹೊಸದಾಗಿ ಪ್ರಯಾಣಿಕರ ಬಸ್ ತಂಗುದಾಣ ನಿರ್ಮಿಸಿ ಸಹಾಯ ಮಾಡಬೇಕು.
ಅನಾಹುತವು ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚತ್ತುಕೊಂಡು ಶ್ರೀಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ಹಿರಿಕಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಮೇಗೌಡ, ಮುಖಂಡ ರಾಜಾಹುಲಿರೇಣುಕಾ ಹಾಗೂ ಪುರ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.