ಉಡುಪಿ: ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ವತಿಯಿಂದ ಜನವರಿ 1ರಿಂದ 10ರವರೆಗೆ 32ನೇ ಮದ್ಯವ್ಯಸನ ವಿಮುಕ್ತಿ ಶಿಬಿರವು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಜರುಗಲಿದೆ ಎಂದು ಮನೋವೈದ್ಯ ಡಾ. ಮಾನಸ್ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರಕ್ಕೆ ದಾಖಲಾಗುವ ಶಿಬಿರಾರ್ಥಿಗಳಿಂದ ಕೇವಲ 500 ರೂ. ಶುಲ್ಕವನ್ನು ಪಡೆಯುತ್ತಿದ್ದು, ಶಿಬಿರಾರ್ಥಿಗಳಿಗೆ ತಗಲುವ ಊಟ, ವಸತಿ, ಚಿಕಿತ್ಸೆಯ ವೆಚ್ಚವನ್ನು ಕಮಲ್ ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್ ಭರಿಸುತ್ತದೆ ಎಂದರು. ಶಿಬಿರಾರ್ಥಿಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಮದ್ಯ ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳು ಮತ್ತು ಜೀವನ ಶೈಲಿ ಬದಲಾವಣೆ ಕುರಿತು ನುರಿತ ತಜ್ಞರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲದ ಸಮಯದಲ್ಲಿ ವಿವಿಧ ಕಾಲೇಜುಗಳಿಂದ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7ರ ನಂತರ ಮದ್ಯವ್ಯಸನದಿಂದ ವ್ಯಕ್ತಿ ಧಾರ್ಮಿಕ ಜೀವನದಿಂದ ದೂರವಿದ್ದು, ಆತನಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಸಲುವಾಗಿ ಪ್ರತಿ ದಿನ ಭಜನೆ ಮತ್ತು ಧಾರ್ಮಿಕ ವಿಚಾರಗಳನ್ನು ಕುರಿತು ಮಾಹಿತಿಯನ್ನು ಆಯೋಜಿಸಲಾಗಿದೆ ಎಂದರು. ಜ.1ರಂದು ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಡಾ.ದೀಪಕ್ ಮಲ್ಯ, ಮನೋವೈದ್ಯ ನಾಗರಾಜ್, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.