ಉಡುಪಿ: ಜಿಲ್ಲೆಯ ಅಕ್ರಮ ಮತಾಂತರ ಕೇಂದ್ರಕ್ಕೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪ್ರಗತಿ ಸೆಂಟರ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಮತಾಂತರ ನಡೆಯುತ್ತಿದೆ. ಬೆನಡಿಕ್ಟ್ ಎಂಬಾತ ಯಾವುದೇ ಅನುಮತಿ ಪಡೆಯದೇ ಮಿಷನರಿಗಳಿಂದ ಅಕ್ರಮವಾಗಿ ಪ್ರಾರ್ಥನಾಲಯ ನಡೆಸುತ್ತಿದ್ದ ಶುಕ್ರವಾರವೂ 60ಕ್ಕೂ ಅಧಿಕ ಮಹಿಳೆಯರನ್ನು ಹತ್ತು ಮಕ್ಕಳನ್ನು ಸೇರಿಸಿ ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂದು ಹಿಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಮಕ್ಕಳು ಮಹಿಳೆಯರನ್ನು ಅಕ್ರಮವಾಗಿ ಕೂಡಿ ಹಾಕಿಕೊಂಡು ಮಿಷನರಿಗಳು ಪ್ರಾರ್ಥನಾ ನಿರತರಾಗಿದ್ದರು. ಖಚಿತ ಮಾಹಿತಿಯ ಆಧಾರದ ಮೇಲೆ ಹಿಂದು ಕಾರ್ಯಕರ್ತರು ಮತಾಂತರ ಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ಹಿಂದು ಸಂಘಟನೆಯ ದಿಢೀರ್ ದಾಳಿಯಿಂದ ಪ್ರಾರ್ಥನಾನಿರತರು ಕಕ್ಕಾಬಿಕ್ಕಿಯಾಗಿದ್ದಾರೆ. ಇದರಿಂದ ಹಿಂದು ಕಾರ್ಯಕರ್ತರು ಮತ್ತು ಪ್ರಾರ್ಥನಾನಿರತರ ನಡುವೆ ಘರ್ಷಣೆಯಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಕಾರ್ಕಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ನೀರಿನಲ್ಲಿ ಮುಳುಗಿಸಿ ಮತಾಂತರ: ಬೆನೆಡಿಕ್ಟ್ ಕಾರ್ಕಳ ಎಂಬಾತ ಮತಾಂತರದ ಪ್ರಾರ್ಥನಾ ವಿಧಿಗಳನ್ನು ನಡೆಸುತ್ತಿದ್ದ. ಪವಿತ್ರ ನೀರಿನಲ್ಲಿ ಮುಳುಗಿಸಿ ಮತಾಂತರ ಮಾಡುತ್ತಿದ್ದ. ಸಾಮೂಹಿಕ ಪ್ರಾರ್ಥನೆಯ ನಂತರ ನೀರಿನಲ್ಲಿ ಮುಳುಗಿ ಎದ್ದರೆ ಕರ್ಮಗಳೆಲ್ಲ ದೂರವಾಗುತ್ತದೆ ಎಂಬ ನಂಬಿಕೆ ಬಿತ್ತುತ್ತಿದ್ದ ಎಂದು ಹಿಂದು ಕಾರ್ಯಕರ್ತರು ದೂರಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ನೂರಾರು ಹಿಂದುಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಆರಂಭದಿಂದಲೂ ಹಿಂದು ಜಾಗರಣ ವೇದಿಕೆ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದೆ. ಸೂಕ್ತ ಮಾಹಿತಿಗಳಿದ್ದರಿಂದ ನಾವು ದಾಳಿ ಮಾಡಿದ್ದೇವೆ. ಪೊಲೀಸರು ಮತಾಂತರ ಕೇಂದ್ರಕ್ಕೆ ಹೋಗಿ ವಿಚಾರಿಸಿದ್ದಾರೆ. ಅದ್ದೂರಿ ಗಣೇಶೋತ್ಸವಕ್ಕೆ ಸರಕಾರ ಅನುಮತಿ ಕೊಟ್ಟಿಲ್ಲ. ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಮತಾಂತರಿಗಳಿಗೆ ಕೋವಿಡ್ ನಿಯಮ ಪಾಲನೆ ಇಲ್ಲವೇ? ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಪ್ರಶ್ನಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಮತಾಂತರ ಕೇಂದ್ರಗಳಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಾವು ದಾಳಿ ಮುಂದುವರಿಸುತ್ತೇವೆ. ಪರಿಸ್ಥಿತಿ ಹದಗೆಡಲು ಅವಕಾಶ ಕೊಡಬೇಡಿ ಎಂದವರು ಎಚ್ಚರಿಸಿದ್ದಾರೆ.