ಉಡುಪಿ: ಕೋವಿಡ್–19 ಕಠಿಣ ನಿರ್ಬಂಧಗಳ ನಡುವೆಯೂ ಜಿಲ್ಲೆಯಲ್ಲಿ ಇಂದು ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಿಲ್ಲೆಯಾದ್ಯಂತ ಒಟ್ಟು 374 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಗಳು ಹಾಗೂ ನಗರ ಪ್ರದೇಶದಲ್ಲಿ ನಗರಾಡಳಿತ ಸಂಸ್ಥೆಗಳು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿವೆ.
ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಅತ್ಯಧಿಕ 126 ಗಣಪತಿ ಕೂರಿಸಲು ಅನುಮತಿ ನೀಡಲಾಗಿದೆ. ಉಡುಪಿ ತಾಲೂಕಿನಲ್ಲಿ 43, ಕಾಪು 30, ಬ್ರಹ್ಮಾವರ 54, ಬೈಂದೂರು 23, ಹೆಬ್ರಿ 20 ಮತ್ತು ಕುಂದಾಪುರ ತಾಲೂಕಿನಲ್ಲಿ 37 ಸೇರಿ ಒಟ್ಟು 333 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ. ನಗರ ಪ್ರದೇಶಗಳ ಪೈಕಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 16, ಕುಂದಾಪುರ ಪುರಸಭೆ 11, ಕಾರ್ಕಳ ಪುರಸಭೆ 6, ಕಾಪು ಪುರಸಭೆ 2 ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6 ಸೇರಿ ಒಟ್ಟ 41 ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.
ಹಲವು ಕಡೆಗಳಲ್ಲಿ ನಿನ್ನೆಯೇ ಗಣಪತಿ ಮೂರ್ತಿಗಳನ್ನು ಕೊಂಡೊಯ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಇಂದು ತಂದು ಪ್ರತಿಷ್ಠಾಪಿಸಲಾಯಿತು. ಈ ಬಾರಿ ದೊಡ್ಡ ಗಾತ್ರದ ಬದಲಾಗಿ ಸಣ್ಣ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸಾರ್ವಜನಿಕರು ಹೆಚ್ಚು ಒಲವು ತೋರಿದ್ದಾರೆ. ಮನೆಗಳಲ್ಲಿಯೂ ಗಣಪನ ಕೂರಿಸಿ, ವಿಶೇಷ ಪೂಜೆ ಮೋದಕ, ಪಂಚಕಜ್ಜಾಯ ಸಹಿತ ನೈವೇದ್ಯ ಸಮರ್ಪಿಸಲಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಉತ್ಸವದಲ್ಲಿ ಮುಂಜಾನೆಯಿಂದಲೇ ಭಜನೆ, ದೇವರನಾಮಗಳ ಪಾರಾಯಣ ನಡೆಯುತ್ತಿದೆ.
ಜಿಲ್ಲೆಯ ಪ್ರಸಿದ್ಧ ಗಣಪತಿ ಕ್ಷೇತ್ರಗಳಾದ ಆನೆಗುಡ್ಡೆ, ಹಟ್ಟಿಯಗಡಿ, ಪೆರ್ಣಂಕಿಲ, ಗುಡ್ಡಟ್ಟು, ಹೊಸಂಗಡಿ ಮೆಟ್ಕಲ್ ಗುಡ್ಡ, ಗರಿಕೆಮಠವೂ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿರುವ ಗಣಪತಿ ದೇವರಿಗೆ ಚೌತಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ.