ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನವನ್ನು ಕಾಲಮಿತಿಗೊಳಪಡಿಸುವ ನಿರ್ಧಾರವನ್ನು ಕೈಬಿಡಬೇಕೆಂದು ರವಿವಾರ ಕದ್ರಿ ದೇಗುಲ ದಲ್ಲಿ ಜರಗಿದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಹಾಗೂ ಯಕ್ಷಗಾನ ಸೇವಾರ್ಥಿಗಳ ಸಭೆಯಲ್ಲಿ ಆಗ್ರಹಿಸಲಾಯಿತು.
ಕಟೀಲು ಮೇಳದ ಯಕ್ಷಗಾನ ಇಡೀ ರಾತ್ರಿಯ ಬಯಲಾಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಹಿಂದೆ ನಡೆದುಕೊಂಡು ಬಂದ ರೀತಿ ಅದರಂತೆಯೇ ಮುಂದುವರಿಯಬೇಕು, ಯಕ್ಷಗಾನವನ್ನು ರಾತ್ರಿ 10.30 ರವರೆಗೆ ನಡೆಸುವ ಕಾಲಮಿತಿ ನಿರ್ಧಾರ ಮರು ಪರಿಶೀಲಿಸಬೇಕು ಎಂದು ತಿಳಿಸಿತ್ತು. ಕಾಲಮಿತಿ ನಿರ್ಧಾರದ ಬಗ್ಗೆ 7ದಿನಗಳ ಒಳಗೆ ಸಂಬಂಧಿಸಿದವರು ಮಾಹಿತಿ ನೀಡಬೇಕೆಂದು ಮನವಿ ಮಾಡಲಾಯಿತು. ಮುಂದಿನ ಚಟುವಟಿಕೆಯಾಗಿ ಹದಿನೈದು ಮಂದಿಯ ಸಮನ್ವಯ ಸಮಿತಿ ರಚಿಸಲಾಯಿತು.
ಈ ಸಭೆ ಯಾರ ವಿರುದ್ಧವೂ ಅಲ್ಲ ಇದು ಭಕ್ತರ ಮನಸ್ಸಿನ ಭಾವನೆಯನ್ನು ದಾಖಲಿಸಿಕೊಳ್ಳುವ ಸಭೆ. ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮೇಳದ ಆಡಳಿತ ಮಂಡಳಿ ಜನಪ್ರತಿನಿಧಿಗಳು ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ ಎಂದು ಸೇವಾರ್ಥಿ ಅಶೋಕ್ ಕೃಷ್ಣಾಪುರ ತಿಳಿಸಿದರು . ಹಿರಿಯ ಸೇವಾರ್ಥಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಕದ್ರಿ ದೇಗುಲದ ಟ್ರಸ್ಟಿ ರಾಜೇಶ್ ಕೊಂಜಾಡಿ ಸೇವಾರ್ಥಿಗಳಾದ ಕೃಷ್ಣಪ್ಪಪೂಜಾರಿ, ದುರ್ಗಾಪ್ರಸಾದ್ ಹೊಳ್ಳ, ಅಶೋಕ್ ಕೃಷ್ಣಾಪುರ ಪಾಲ್ಗೊಂಡಿದ್ದರು.