ಉಳ್ಳಾಲ: ಗ್ರಾಮಸ್ಥರ ಆರೋಗ್ಯ ಕಾಪಾಡಲು ಆರೋಗ್ಯ ಕೇಂದ್ರ ಸಹಕಾರಿಯಾಗಲಿದೆ. ಅಷ್ಟಕ್ಕೂ ಜನರಿಗೆ ಆರೋಗ್ಯ ಮುಖ್ಯ. ನಾನು ಕಷ್ಟದಲ್ಲೇ ಬೆಳೆದ ಅನುಭವ ಇದ್ದ ಕಾರಣ ಹರೇಕಳ ಗ್ರಾಮಸ್ಥರ ಕಷ್ಟ ನೋಡಿ ಈ ಭಾಗದಲ್ಲಿ ನಮ್ಮದೊಂದು ಗುರುತು ಬಿಟ್ಟು ಹೋಗಬೇಕು ಎಂಬ ನೆಲೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ.ಶಂಕರ್ ಅಭಿಪ್ರಾಯಪಟ್ಟರು.
ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಹರೇಕಳದ ಬಾವಲಿಗುಳಿಯಲ್ಲಿ ನಿರ್ಮಿಸಲಾದ ಆರೋಗ್ಯ ಕೇಂದ್ರವನ್ನು ಶನಿವಾರ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ವಿಧಾನ ಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಮಾತನಾಡಿ ರಾಜ್ಯದಲ್ಲೇ ಕುಗ್ರಾಮವಾಗಿದ್ದ ಹರೇಕಳದ ಗ್ರಾಮ ಪಂಚಾಯಿತಿ ಕಟ್ಟಡ ಧರೆಗುರುಳುವ ಸ್ಥಿತಿಯಲ್ಲಿದ್ದುದ್ದು ಈಗಿನ ಕಟ್ಟಡ ನೋಡುವಾಗ ಈ ಊರಿನ ಚಿತ್ರಣವೇ ಕಳೆದ ಆರು ವರ್ಷದಲ್ಲಿ ಬದಲಾಗಿದೆ ಎಂಬುದು ನಿಜಕ್ಕೂ ಸಂತಸ ತಂದಿದೆ ಎಂದರು.
ಗ್ರಾಮದ ಮಾದರಿ ಪಂಚಾಯಿತಿ ಕಟ್ಟಡ, ಆರೋಗ್ಯ ಕೇಂದ್ರ, ಅಡ್ಯಾರ್ ಗೆ ಸಂಪರ್ಕ ಸೇತುವೆ ಸೇರಿದಂತೆ ಅತ್ಯಂತ ಅಭಿವೃದ್ಧಿ ಹೊಂದುವ ಗ್ರಾಮ ಹರೇಕಳವಾಗಿದೆ. ಈಗಾಗಲೇ ಉದ್ಯಮಿಗಳು ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ. ಗ್ರಾಮಸ್ಥರು ಶಾಂತಿಸೌಹಾರ್ದತೆ ಒಗ್ಗಟ್ಟು ಕಾಪಾಡಿ ಸೋದರರಂತೆ ಇದ್ದರೆ ಸಾಕು, ಅಭಿವೃದ್ಧಿ ನಿಮ್ಮ ಕಾಲಬುಡಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಎಂದು ವಿಶ್ವಾಸದ ಮಾತುಗಳನ್ನಾಡಿದರು.
ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ವೈ. ಅಬ್ದುಲ್ಲ ಕುಂಞಿ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ್, ಹಿರಿಯರಾದ ರಾಮ್ ದಾಸ್ ಪೂಂಜ, ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಶಾಲಿ, ರೂಪರಾಜ್ ರೈ, ಬಿಜೆಪಿ ಅಧ್ಯಕ್ಷ ಸುಧಾಕರ್ ಗಟ್ಟಿ, ಎಸ್ ಡಿಪಿಐ ಅಧ್ಯಕ್ಷ ಬಶೀರ್, ಡಿವೈಎಫ್ಐ ಉಳ್ಳಾಲ ವಲಯಾಧ್ಯಕ್ಷ ರಫೀಕ್ ಹರೇಕಳ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ ಉಪಸ್ಥಿತರಿದ್ದರು.
ಇದೇ ಸಂದರ್ಭ ಹರೇಕಳ ಗ್ರಾಮಕ್ಕೆ ಹಲವು ಕೊಡುಗೆಗಳ ಜತೆಗೆ ಆರೋಗ್ಯ ಕೇಂದ್ರ ನಿರ್ಮಿಸಿ ಕೊಟ್ಟ ನಾಡೋಜ ಡಾ. ಜಿ. ಶಂಕರ್ ಹಾಗೂ ತ್ಯಾಜ್ಯ ಘಟಕಕ್ಕೆ ತ್ಯಾಜ್ಯ ವಿಲೇವಾರಿ ವಾಹನ ಒದಗಿಸಿದ ನೆನಪಿಗಾಗಿ ಕೃತಜ್ಞಾಪೂರ್ವಕವಾಗಿ ಸನ್ಮಾನಿಸಲಾಯಿತು.
ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ವಂದಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.