ಬೆಳ್ತಂಗಡಿ: ಸಿರೋ ಮಲಬಾರ್ ಕ್ರೈಸ್ತರ ಆಚಾರ ವಿಚಾರಗಳು, ಚಿಂತನೆಗಳು ಭಾರತೀಯ ಸಂಸ್ಕೃತಿಯೊಂದಿಗೆ ಮೇಳೈಸಿರುವುದಾಗಿದೆ. ಸಮಾಜದ ಏಳಿಗೆಗಾಗಿ ಶ್ರಮಿಸುವುದರೊಂದಿಗೆ ದೇಶದ ಎಲ್ಲ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಂತಹ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಕರ್ನಾಟಕ ಸಿರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ನ ಪದಗ್ರಹಣ ಮತ್ತು ನಾಯಕತ್ವ ಶಿಬಿರದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಕ್ರೈಸ್ತ ಸಮುದಾಯದ ಸೇವಾ ಚಟುವಟಿಕೆಗಳು ಸಮಾಜದ ಎಲ್ಲ ಜನರನ್ನೂ ತಲುಪುವಂತದ್ದಾಗಿದೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮಹತ್ವದ ಸೇವೆಯನ್ನು ನೀಡುತ್ತಿದೆ ಕೆ.ಎಸ್ ಎಂ.ಸಿ.ಎ. ಸಂಘಟನೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರೊಂದಿಗೆ ಸಮಾಜದ ಹಕ್ಕುಗಳನ್ನು ಪಡೆದುಕೊಳ್ಳುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಮುಖ್ಯ ಆತಿಥಿಗಳಾಗಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ ಸಿರೋ ಮಲಬಾರ್ ಕ್ರೈಸ್ತರು ಶ್ರಮ ಜೀವಿಗಳಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದವರಾಗಿದ್ದಾರೆ. ತಾಲೂಕಿನ ಚರ್ಚ್ ಗಳ ಅಭಿವೃದ್ದಿಗೆ ಈಗಾಗಲೇ ಸಾಕಷ್ಟು ಅನುದಾನ ಒದಗಿಸಲಾಗಿದೆ. ಕೆ.ಎಸ್.ಎಂ.ಸಿ.ಎ ಸಂಘಟನೆಯ ಮುಂದಿನ ಕಾರ್ಯ ಚಟುವಟಿಕೆಗಳಿಗಾಗಿ ಪ್ರತಿ ವರ್ಷ ಒಂದು ಲಕ್ಷದಂತೆ ಅನುದಾನವನ್ನು ವೈಯುಕ್ತಿವಾಗಿ ಒದಗಿಸುವುದಾಗಿ ಅವರು ಪ್ರಕಟಿಸಿದರು.ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಸಮಾಜಕ್ಕೆ ನೆರವಾಗುವ ಕಾರ್ಯವನ್ನು ಮಾಡೋಣ ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಬೆಳ್ತಂಗಡಿಯ ಬಿಷಪ್ ಅವರ ನೇತೃತ್ವದಲ್ಲಿ ಅಶಕ್ತರಿಗೆ ಶಕ್ತಿ ಕೊಡುವ ಕಾರ್ಯ ನಡೆಯುತ್ತಿದೆ. ಇಂದಿನ ದಿನಗಳಲ್ಲಿ ಸಂಘಟನೆಯ ಅಗತ್ಯವಿದೆ ಸಂಘಟಿತರಾದರೆ ಮಾತ್ರ ಸಮುದಾಯ ತನ್ನ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಸಂಘಟನೆಗೆ ಎಲ್ಲ ರೀತಿಯ ಬೆಂಬಲ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಬೆಟ್ಟಿ ನೆಡುನಿಲಂ ವಹಿಸಿದ್ದರು. ನಿರ್ದೇಶಕರಾದ ಫಾ. ಶಾಜಿ ಮ್ಯಾಥ್ಯೂ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನೆಯ ಮುಖಂಡರುಗಳಾದ ಬೆನ್ನಿ ಕೋಲಾಂಚೇರಿ, ಮಾಥ್ಯೂ, ಕೆ.ಕೆ ಸೆಬಾಸ್ಟಿಯನ್, ಸೆಬಾಸ್ಟಿಯನ್ ಪಿ.ಸಿ, ಜಿಮ್ಸನ್ ಕೆ.ಜೆ, ಅಲ್ಫೋನ್ಸಾ, ಜೋರ್ಜ್ ಟಿ.ವಿ, ರೀನಾ ಶಿಬಿ, ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ ಸ್ವಾಗತಿಸಿದರು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಂದ ಆಗಮಿಸಿದ ಸಂಘಟನೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾದರು.