ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವ ತಿಯಿಂದ ಮುಂದಿನ ಫೆ. 3 ರಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಧರ್ಮಸ್ಥಳದ ಡಾ!ಹೇಮಾವತಿ ಹೆಗ್ಗಡೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯ ಜ. 1 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉದ್ಘಾಟಿಸಲ್ಪಡಲಿದೆ ಎಂದು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯರು ತಿಳಿಸಿದ್ದಾರೆ.
ಅವರು ಡಿ .29 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂಚಾಲಕರ ಪೂರ್ವತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದ .ಕ.ಜಿಲ್ಲಾ ಕ.ಸಾ ಪ. ಅಧ್ಯಕ್ಷ ಡಾ!ಎಂ.ಪಿ.ಶ್ರೀನಾಥ್ ಉಪಸ್ಥಿತಿಯಲ್ಲಿ ನಡೆದ ಸಮಾಲೋಚನಾ ಸಭೆ ಯಲ್ಲಿ ವಿವಿಧ ಸಮಿತಿ ಸಂಚಾಲಕರು ಭಾಗವಹಿಸಿದ್ದು ಇತರ 9 ತಾಲೂಕು ಸಮಿತಿಗಳ ಸದಸ್ಯರನ್ನೊಳಗೊಂಡು ಕೆಲವೇ ದಿನಗಳಲ್ಲಿ ಪೂರ್ಣಪ್ರಮಾಣದ ಸಮಿತಿ ರಚನೆ ಅಂತಿಮಗೊಳಿಸುವುದು ,ಆಯಾ ಸಮಿತಿಯವರ ಕಾರ್ಯಯೋಜನೆಗಳು,ತಯಾರಿ ಹಾಗು ಬಡ್ಜೆಟ್ ತಯಾರಿ ಇತ್ಯಾದಿಗಳ ಕುರಿತು ಚರ್ಚಿಸಲಾಯಿತು. ಮುಂದಿನ ಪೂರ್ವತಯಾರಿ ಸಭೆ ಜ 3 ರಂದು ಸಂಜೆ 5 ಕ್ಕೆ ನಡೆಯಲಿದ್ದು ಅಂತಿಮ ರೂಪುರೇಷೆ ನೀಡಬೇಕಾಗಿದೆ ಎಂದು ಅಭಿಪ್ರಾಯ ಪಡಲಾಯಿತು.
ಸಾಹಿತ್ಯ ಪರಿಷತ್ ಗೆ ಹೊಸ ಸದಸ್ಯರ ಸೇರ್ಪಡೆ, ಸಮ್ಮೇಳನಕ್ಕೆ ಸದಸ್ಯರ ನೋಂದಾವಣೆ ,ಗೋಷ್ಠಿಗಳಿಗೆ ವಿಷಯ ಆಯ್ಕೆ,ಸಂಪನ್ಮೂಲ ವ್ಯಕ್ತಿಗಳ ಆಯ್ಕೆ,ಕವಿಗೋಷ್ಠಿ,ಸನ್ಮಾನಿತರ ಬಗೆಗೆ ಮಾಹಿತಿ ಕೊಡುವಂತೆ ತಾಲೂಕು ಸಮಿತಿಗಳನ್ನು ಸಂಪರ್ಕಿಸಿ ಯಾದಿ ಅಂತಿಮಗೊಳಿಸುವುದು,ಸ್ಮರಣಿಕೆ,ಅತಿಥಿಗಳು ಹಾಗು ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಂಭಾವನೆ ನೀಡುವ ಕುರಿತು ಚರ್ಚಿಸಲಾಯಿತು. ಸಮಿತಿಗಳಿಗೆ ಅವಶ್ಯವೆನಿಸಿದರೆ ಸಹಸಂಚಾಲಕರನ್ನು ಆಯ್ಕೆಮಾಡಿಕೊಳ್ಳಬಹುದೆಂದು ಅಭಿಪ್ರಾಯಪಡಲಾಯಿತು.
ಸ್ವಾಗತ ಸಮಿತಿ,ಆರ್ಥಿಕ ಸಮಿತಿ,ಆಹಾರ ಸಮಿತಿ,ಸ್ಮರಣ ಸಂಚಿಕೆ ಸಮಿತಿ,ಕಾರ್ಯಕ್ರಮ ಸಂಯೋಜನೆ ಸಮಿತಿ,ಅರೋಗ್ಯ ಸಮಿತಿ,ವಸತಿ ಸಮಿತಿ,ಆಮಂತ್ರಣ ಮತ್ತು ಪ್ರಚಾರ ಸಮಿತಿ, ಮಾಹಿತಿ ಸಮಿತಿ,ಮಾಧ್ಯಮ ಸಮಿತಿ,ವಸ್ತು-ಪುಸ್ತಕ ಪ್ರದರ್ಶನ ಸಮಿತಿ,ಸ್ವಯಂಸೇವಕ ಸಮಿತಿ,ಸಾಂಸ್ಕೃತಿಕ ಸಮಿತಿ,ವೇದಿಕೆ ಮತ್ತು ಅಲಂಕಾರ ಸಮಿತಿ ಮತ್ತಿತರ ಸಮಿತಿಗಳನ್ನು ರಚಿಸಲಾಗಿದ್ದು ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಕೂಡಲೇ ಸಮಿತಿ ರಚನೆ ಪೂರ್ಣಗೊಳಿಸಬೇಕೆಂದು ನಿರ್ಣಯಿಸಲಾಯಿತು. ಶಾರದಾ ಮಂಟಪದಲ್ಲಿ ಪುಸ್ತಕ ಪ್ರದರ್ಶನ-ಮಾರಾಟ ಮಳಿಗೆ ಮತ್ತು ರಥಬೀದಿಯಲ್ಲಿ ಇತರ ಮಾರಾಟ ಮಳಿಗೆಗಳಿಗೆ ಬಾಡಿಗೆ ಆಧಾರದಲ್ಲಿ ಅವಕಾಶನೀಡುವ ಕುರಿತು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತಿಗಳು,ಕವಿಗಳ ಕೃತಿ ಬಿಡುಗಡೆಗೆ ಅವಕಾಶವಿದ್ದು ಕೃತಿಕಾರರು ಕೂಡಲೇ ಮಾಹಿತಿ ಕಳಿ ಸಿಕೊಡುವಂತೆ ಡಾ! ಶ್ರೀನಾಥ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ಆರ್ಥಿಕ ಸಮಿತಿ ಸಂಚಾಲಕ ಮೋಹನ ಶೆಟ್ಟಿಗಾರ್,ಸ್ವಾಗತ ಸಮಿತಿ ಸಂಚಾಲಕ ಯದುಪತಿ ಗೌಡ,ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಡಾ! ಕುಮಾರ ಹೆಗ್ಡೆ,ವಸತಿ ಸಮಿತಿ ಸಂಚಾಲಕ ರಾಜೇಶ್ ಪಿ. ,ಮಾಧ್ಯಮ ಸಮಿತಿ ಸಂಚಾಲಕ ಡಾ! ಭಾಸ್ಕರ ಹೆಗ್ಡೆ, ಪ್ರದರ್ಶನ ಸಮಿತಿ ಸಂಚಾಲಕ ಯತೀಶ್,ಡಾ!ರಾಜಶೇಖರ ಹಳೆಮನೆ,ಸುನಿಲ್ ಪಂಡಿತ್,ರಮೇಶ್ ಮಯ್ಯ, ಹರ್ಷಕುಮಾರ್, ಸುಭಾಸ್ ಬೋಳೂರು, ಅನುರಾಧ,ವಿದ್ಯಾಶ್ರೀ ಅಡೂರು, ವಿನುತಾ ರಜತ್ ಗೌಡ,ಸಾಂತೂರು ಶ್ರೀನಿವಾಸ ತಂತ್ರಿ ಮೊದಲಾದವರು ಉಪಸ್ಥಿತರಿದ್ದು ಅಭಿಪ್ರಾಯ ಮಂಡಿಸಿದರು. ತಾಲೂಕು ಕ.ಸಾ.ಪ. ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.