ಮಂಗಳೂರು: ನಾನು ಮತ ಕೇಳುವುದಕ್ಕೆ ಹೋದಲ್ಲೆಲ್ಲ ಜನರ ಕಾಂಗ್ರೆಸ್ ಕಡೆಗೆ ಆಕರ್ಷಿತರಾಗಿರುವುದು ದೃಢಪಟ್ಟಿದೆ. ಬಿಜೆಪಿ ಆಡಳಿತದ ವೈಫಲ್ಯ, ಭ್ರಷ್ಟಾಚಾರದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೋದಲ್ಲೆಲ್ಲ ಬದಲಾವಣೆ ಬೇಕು. ಕಾಂಗ್ರೆಸ್ಗೆ ಮತ ಹಾಕುತ್ತೇವೆ ಎಂದು ಜನರು ತಿಳಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಜೆ. ಆರ್. ಲೋಬೊ ಹೇಳಿದರು.
ನ್ಯೂಸ್ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತು ಮನದಾಳವನ್ನು ಹಂಚಿಕೊಂಡರು. 150 ಕ್ಕಿಂತ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂಬುದನ್ನು ಹಲವಾರು ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ತುಳುವಿಗೆ ಅಧಿಕೃತ ಭಾಷೆ ಸ್ಥಾನ ಮಾನ ನೀಡುವ ಕೆಲಸ ಮಾಡಲಿದೆ. ಇತಿಹಾಸ ಗಮನಿಸಿದಲ್ಲಿ ತುಳು ಹಲವು ಭಾಷೆಗಳಿಗೆ ಮೂಲ ಎಂಬುದು ತಿಳಿದುಬರುತ್ತದೆ. ಕೊಡವ, ಮಲಯಾಳಂ ಭಾಷೆಯಲ್ಲಿಯೂ ಕೂಡ ತುಳುವಿನ ಹಲವು ಶಬ್ದಗಳಿವೆ. ಇದು ತುಳುವಿನ ಶ್ರೇಷ್ಠತೆ, ಇತಿಹಾಸವನ್ನು ಸಾರುತ್ತದೆ.
ಈ ನಿಟ್ಟಿನಲ್ಲಿ ತುಳುವಿನಂತಹ ಶ್ರೇಷ್ಠ ಭಾಷೆಗೆ ಸೂಕ್ತ ಸ್ಥಾನ ಮಾನ ನೀಡುವ ಕೆಲಸ ಮಾಡುತ್ತೇವೆ ಎಂದರು. ಅಂತೆಯೇ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಿಗೆ ತುಳುನಾಡಿನಲ್ಲಿ ಸೂಕ್ತ ಉದ್ಯೋಗ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ, ಕ್ರೀಡಾ ಪ್ರವಾಸೋದ್ಯಮ, ಐಟಿ, ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಭವಿಷ್ಯದ ಕಾಂಗ್ರೆಸ್ ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು.