ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಪ್ರಕ್ರಿಯೆ ಒಪ್ಪುವಂಥದ್ದಲ್ಲ. ಬೇರೆ ಬೇರೆ ಆಯಾಮಗಳಲ್ಲಿ ಸ್ಥಳೀಯವಾಗಿ ಚರ್ಚೆ ಇದೆ. ಅವರ ತಂದೆ, ಕಾರ್ಯಕರ್ತರು ಹೇಳುವ ಆಯಾಮದಲ್ಲೂ ತನಿಖೆಯಾಗಲಿ. ಯಾರನ್ನೋ ಸಮಾಧಾನ ಪಡಿಸಲು ಕೆಲವರನ್ನು ತೋರಿಸುವುದು ಸರಿಯಲ್ಲ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ನೈಜ ಹಂತಕರ ಬಂಧನವಾಗಲಿ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಎಸ್ ಡಿಪಿಐ ಪಕ್ಷದಿಂದ ಸುದ್ದಿಗೋಷ್ಟಿ ಆಯೋಜಿಸಿದ್ದು, ಅದರಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಮಾತನಾಡಿದರು. ದ.ಕ ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ಡಿಪಿಐ ಪಕ್ಷ ಖಂಡಿಸುತ್ತದೆ. ಸದ್ಯ ಮೂರು ಕೊಲೆ ಆರೋಪಿಗಳ ಬಂಧನ ಆಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಾವು ಕೋರುತ್ತೇವೆ. ಆದ್ರೆ ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ. ಒಂದು ಪ್ರದೇಶದಲ್ಲಿ ಎರಡು ಕೊಲೆ ಆದರೂ ಒಂದು ಕೊಲೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇನ್ನೊಂದರ ಬಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ಎಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವೀಣ್ ಹತ್ಯೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಎನ್ಐಎಗೆ ನೀಡ್ತಾರೆ. ಅದೇ ಮಸೂದ್ ಹತ್ಯೆಯಲ್ಲಿ ಇಷ್ಟು ಕಾಳಜಿ ಯಾಕಿಲ್ಲ, ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದರೂ ಬಿಜೆಪಿಗರ ಬಾಯಲ್ಲಿ ಬರೋ ಹೆಸರೇ ಎಸ್ಡಿಪಿಐ. ಪ್ರವೀಣ್ ಹತ್ಯೆ ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ಆದ್ರೆ ಫಾಝಿಲ್ ಹತ್ಯೆಯಲ್ಲಿರುವ ಆರೋಪಿಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶದವರು. ಎಲ್ಲಿ ಸಂಘಟಿತವಾಗಿ ಹತ್ಯೆ ನಡೆದಿದೆ ಎಂಬುದನ್ನ ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಲಿ ಎಂದು ಒತ್ತಾಯಸಿದರು.
ಪ್ರವೀಣ್ ಆರೋಪಿಗಳಿಗೆ ಮಸೀದಿಯವರು ಬೆಂಬಲಿಸಿದ್ದಾರೆ ಎಂಬ ಪುತ್ತೂರು ಶಾಸಕರ ಹೇಳಿಕೆ ವಿಚಾರ: ಫಾಝಿಲ್ ಹತ್ಯೆಕೋರರು ಹತ್ಯೆ ಮಾಡಿ ನೇರ ಕಾರಿಂಜೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇದನ್ನು ಯಾರಾದ್ರೂ ಹೇಳಿದ್ದಾರಾ..? ಶಾಸಕರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಶಾಸಕರು ನೀವು ಕೇವಲ ಒಂದು ಧರ್ಮಕ್ಕೆ ಶಾಸಕರ..? ಸುಳ್ಯದಲ್ಲಿ ಒಂದೂವರೆ ವರ್ಷ ಮೊದಲು ಬಂದ್ ಮಾಡಲಾದ ಕಚೇರಿಯಲ್ಲಿ ಮಹಜರು ಎಂದು ಬಿಂಬಿಸ್ತಾರೆ. ಇದು ಯಾವ ರೀತಿಯ ರಾಜಕೀಯ ವ್ಯವಸ್ಥೆ? ನಮಗೆ ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇದೆ. ನಿಮಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲದಿದ್ದಾರೆ ಬಿಡಿ. ನಮಗೆ ಎನ್ ಐಎಗಿಂತ ಕರ್ನಾಟಕ ಪೊಲೀಸ್ ಮೇಲೆ ನಂಬಿಕೆ ಇದೆ. ಅವರಿಗೆ ತನಿಖೆಗೆ ಸಂಪೂರ್ಣ ಅವಕಾಶ ಕೊಡಿ. ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಮೇಲೆ ತನಿಖೆ ಆಗಲಿ. ಯುಎಪಿಎ ಅಡಿ ಎನ್ಐಎ ತನಿಖೆ ಮೂಲಕ ಬಹಿರಂಗ ಪಡಿಸಿ. ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ವಿಚಾರದಲ್ಲಿ ಸರಿಯಾದ ಕ್ರಮ ಇಲ್ಲ. ಎಲ್ಲಾ ಆಯಾಮದಲ್ಲಿ ತನಿಖೆ ಆಗಿ ಬಂಧನ ಆಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವ ಸಾದಾತ್ ಬಜತ್ತೂರು, ಜಿಲ್ಲಾ ಸಮಿತಿಯ ಸದಸ್ಯ ಅಶ್ರಫ್ ಕೆ.ಸಿ.ರೋಡು ಉಪಸ್ಥಿತರಿದ್ದರು.