ಪುತ್ತೂರು: ಅಯೋಧ್ಯೆಯಲ್ಲಿ ಹಿಂದೂಗಳ ನೂರಾರು ವರ್ಷದ ಕನಸಾಗಿರುವ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಈ ಶುಭ ಸಮಾರಂಭದ ಆಮಂತ್ರಣವನ್ನು ದೇಶದ ಮೂಲೆ ಮೂಲೆಗೂ ಹಂಚುವ ಕಾರ್ಯವನ್ನು ಶ್ರೀ ರಾಮಜನ್ಮಭೂಮಿ ಟ್ರಸ್ಟ್ ನಡೆಸುತ್ತಿದೆ.
ಇದೀಗ ಪುತ್ತೂರಿಗೆ ಶ್ರೀರಾಮ ಜನ್ಮಭೂಮಿ ಉದ್ಘಾಟನೆ ಆಮಂತ್ರಣ ಪತ್ರಿಕೆ, ಅಕ್ಷತೆ ತಲುಪಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳಕ್ಕೆ ತಲುಪಿದ ಅಕ್ಷತೆಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆಡಳಿತ ಮಂಡಳಿ ಸದಸ್ಯರು ಬರಮಾಡಿಕೊಂಡರು. ನಂತರ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಿ ಅಕ್ಷತೆಗೆ ಪೂಜೆ ಸಲ್ಲಿಸಲಾಯಿತು.
ನವಂಬರ್ 30 ರ ತನಕ ದೇವಸ್ಥಾನದ ಗರ್ಭಗುಡಿಯಲ್ಲಿ ಅಕ್ಷತೆಯನ್ನು ಇರಿಸಲಾಗುವುದು. ನ.30 ರಂದು ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ಸಮಿತಿಯ ತಾಲೂಕು ಘಟಕದ ಸಭೆ ನಡೆಯಲಿದ್ದು, ಸಭೆಯಲ್ಲಿ ತಾಲೂಕು ಘಟಕ ಮತ್ತು ಗ್ರಾಮ ಘಟಕಗಳಿಗೆ ಅಕ್ಷತೆಯ ಹಸ್ತಾಂತರ ಮಾಡಲಾಗುವುದು. ಜ.1 ರ ತನಕ ಆಯಾಯ ಗ್ರಾಮದ ದೈವ ಮತ್ತು ದೇವಸ್ಥಾನದಲ್ಲಿ ಅಕ್ಷತೆ ಇರಿಸಲಾಗುವುದು. ಜ.1 ರಿಂದ 15 ರಿಂದ ಪ್ರತೀ ಹಿಂದೂ ಮನೆಗಳಿಗೆ ಅಕ್ಷತೆ ಹಂಚಿಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ.