ಮಂಗಳೂರು, ನ.14: “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಂಬಾ ಮಂದಿ ಕಲಾವಿದರಿದ್ದಾರೆ. ಆದರೆ, ಚಿತ್ರ ಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಸಾಲದು. ಭವಿಷ್ಯದಲ್ಲಿ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ,” ಎಂದು ಹಿರಿಯ ಚಿತ್ರ ಕಲಾವಿದ, ಕಲಾ ಇತಿಹಾಸಕಾರ ಸುದೇಶ್ ಮಹಾನ್ ಹೇಳಿದರು.
ಅವರು ಶನಿವಾರ ನಗರದ ಕೊಡಿಯಾಲಗುತ್ತು ಸೆಂಟರ್ ಫಾರ್ ಆರ್ಟ್ ಆಂಡ್ ಕಲ್ಚರ್ ಕೇಂದ್ರದಲ್ಲಿ ಆಯೋಜಿಸಿದ ಕಲಾ ಇತಿಹಾಸ ತಜ್ಞ ನೇಮಿರಾಜ್ ಶೆಟ್ಟಿ ಅವರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದರು.
ಮಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಪಾವಂಜೆ ಕಲಾ ಪೀಠದ ಸಹಯೋಗದೊಂದಿಗೆ ಆರ್ಟ್ ಕೆನರಾ ಟ್ರಸ್ಟ್ ಮತ್ತು ಇಂಟಾಕ್ ಮಂಗಳೂರು ಅಧ್ಯಾಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೊಡಗು, ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 34 ಅಗಲಿಹೋದ ಚಿತ್ರ ಕಲಾವಿದರ ಮಾಹಿತಿ ದಾಖಲೀಕರಣ ಮತ್ತು ಚಿತ್ರ ಪ್ರದರ್ಶನ ‘ಮೊಡೆಪು’ ದ ಸಮಾರೋಪದ ಅಂಗವಾಗಿ ಈ ಸಂವಾದ ಆಯೋಜಿಸಲಾಗಿತ್ತು.
ಕೆ.ಕೆ. ಹೆಬ್ಬಾರ್, ಜಿ. ಎಸ್. ಶೆಣೈ, ರಾಮದಾಸ ಅಡ್ಯಂತಾಯ ಮುಂತಾದವರು ಮಂಗಳೂರಿನಿಂದ ಹೊರಹೋಗಿ ತಮ್ಮದೇ ಶೈಲಿಯ ಕಲಾಕೃತಿಗಳನ್ನು ನೀಡಿದರು, ಆದರೆ ಬಹುತೇಕ ಕರಾವಳಿಯ ಕಲಾವಿದರು ತಾವು ಕಂಡ ದೃಶ್ಯಗಳನ್ನು ಮರುಸೃಷ್ಟಿ ಮಾಡಿದರು ಎಂದು ಮಹಾನ್ ಹೇಳಿದರು.
ಸುಳ್ಯ ಸಮೀಪ ಸೋಣಂಗೇರಿ ಗ್ರಾಮದಲ್ಲಿ 1993-1998ರ ಅವಧಿಯಲ್ಲಿ ನಡೆದ ಬಯಲು ಚಿತ್ರಾಲಯ ಪ್ರಯೋಗದ ಬಗ್ಗೆ ಕೊಡಿಯಾಲಗುತ್ತು ಸೆಂಟರ್ ಫಾರ್ ಆರ್ಟ್ ಆಂಡ್ ಕಲ್ಚರ್ ನ ನೇಮಿರಾಜ್ ಶೆಟ್ಟಿ ಅವರ ಪ್ರಸ್ತಾವಣೆಗೆ ಪ್ರತಿಕ್ರಿಯೆ ನೀಡಿದ ಸುದೇಶ್ ಮಹಾನ್ ಅವರು ನಮ್ಮ ದೇಶದಲ್ಲೇ ಮೊದಲ ಕಲಾ ಪ್ರಯೋಗ ಇದಾಗಿದ್ದು, ಒಂದಿಡಿ ಗ್ರಾಮವನ್ನೆ ಆರ್ಟ್ ಗ್ಯಾಲರಿ ಮಾಡಿದ ಹಿಂದಿನ ರೂವಾರಿ ದಿ.ಮೋಹನ ಸೋನ ಅವರಾಗಿದ್ದು, ಪ್ರಯೋಗದ ಸರಿಯಾದ ದಾಖಲೀಕರಣ ಆಗಿಲ್ಲ, ಈ ರೀತಿಯ ಪ್ರಯತ್ನ ಮತ್ತೊಮ್ಮೆ ಆಗಬೇಕಾಗಿದೆ ಎಂದರು.
ತಮ್ಮ ತಂದೆಯವರು ಆರಂಭಿಸಿದ ಅಜಂತ ಕಲಾಶಾಲೆ, ಬಿ.ಜಿ. ಮೊಹಮದ್ (ಬಿಜಿಎಂ) ಅವರ ಕಲಾಶಾಲೆ, ಮಂಗಳೂರಿನಲ್ಲಿ ಆರ್ಟ್ ಗ್ಯಾಲರಿ ಪ್ರಯೋಗಗಳ ಬಗ್ಗೆ ಕೂಡ ಸಂವಾದ ನಡೆಯಿತು.
ದಾಖಲೀಕರಣ ಕಲಾವಿದನ ಕೆಲಸ ಅಲ್ಲದಿರಬಹುದು. ಆತ ಸೃಜನಶೀಲ ಕೃತಿ ರಚನೆಯಲ್ಲಿ ತೊಡಗಿದಾಗ ದಾಖಲೀಕರಣ ಕಾರ್ಯವನ್ನು ಸಂಸ್ಥೆಗಳು ವಹಿಸಿಕೊಳ್ಳಬೇಕು. ನಮ್ಮ ನಾಡಿನಲ್ಲಿ ಯಕ್ಷಗಾನ, ಸಂಗೀತ, ನಾಟ್ಯಕ್ಕೆ ದೊರೆಯುವ ಆದ್ಯತೆ ಚಿತ್ರಕಲೆಗೆ ದೊರೆಯುತ್ತಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ. ಕಲ್ಲುರಾಯ ಅಭಿಪ್ರಾಯ ಪಟ್ಟರು. ರೋಶನಿ ನಿಲಯ ಕಾಲೇಜು ಮತ್ತು ನಗರದ ಕಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂವಾದದಲ್ಲಿ ಭಾಗವಹಿಸಿದರು.
ಮೊಡೆಪು ದಾಖಲೀಕರಣದ ಕೃತಿಕಾರರಾದ ಡಾ.ಜನಾರ್ದನ ಹಾವಂಜೆ ಅವರು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಮತ್ತು ಯೋಜನೆಯ ಸಲಹೆಗಾರರಾದ ಸುಭಾಶ್ಚಂದ್ರ ಬಸು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರಿಂದ ಸಂಗೀತ ಕಛೇರಿ ನಡೆಯಿತು. ಅವರಿಗೆ ತಬಲಾದಲ್ಲಿ ವಿಘ್ನೇಶ್ ಕಾಮತ್ ಸಾಥ್ ನೀಡಿದರು.
ಪ್ರದರ್ಶನವು 2022 ನವೆಂಬರ್ 20 ರಿಂದ 27 ರವರೆಗೆ ಉಡುಪಿಗೆ ಪ್ರಯಾಣಿಸಲಿದ್ದು, ಅಲ್ಲಿ ಉಡುಪಿಯ ಇಂಟಾಕ್ ಉಪ-ಚಾಪ್ಟರ್ ಮತ್ತು ಆರ್ಟಿಸ್ಟ್ಸ್ ಫೋರಮ್ ಆಶ್ರಯದಲ್ಲಿ ಕೆ.ಎಂ.ಮಾರ್ಗ್ ನ ಗ್ಯಾಲರಿ ದೃಷ್ಟಿಯಲ್ಲಿ (ಅಲಂಕಾರ್ ಟಾಕೀಸ್ ಹಿಂಭಾಗದಲ್ಲಿ) ಆಯೋಜಿಸಲಾಗಿದೆ.