ಮಂಗಳೂರು: ಈ ವರ್ಷದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ – 2022 ನ್ನು ಇದೇ ಶನಿವಾರ, ಆಗಸ್ಟ್ 27, 2022ರಂದು ಸಂಜೆ 4.30 ಗಂಟೆಗೆ ಬಿಷಪ್ ಜತ್ತನ್ನ ಸಭಾಂಗಣ, ಸಹೋದಯ, ಬಲ್ಮಠ, ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು,
ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನಾಯಕರು, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರಾಗಿದ್ದ ಶ್ರೀ ಬಿವಿ ಕಕ್ಕಿಲ್ಲಾಯರ (1919-2012) ಗೌರವಾರ್ಥ, ದೇಶದ ಬಹು ಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಈ ಉಪನ್ಯಾಸಗಳನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಆಯೋಜಿಸುತ್ತಿವೆ.
ಡಾ. ಅಪೂರ್ವಾನಂದ್ ಅವರು ದಿಲ್ಲಿ ವಿಶ್ವವಿದ್ಯಾನಿಲಯದ ಹಿಂದಿ ಭಾಷೆಯ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಲೇಖಕರೂ, ಅಂಕಣಕಾರರೂ, ರಾಜಕೀಯ ವಿಮರ್ಶಕರೂ ಆಗಿದ್ದಾರೆ.
ಬಿಹಾರದ ಮುಜಫರ್ಪುರದಲ್ಲಿ ಜನಿಸಿದ ಅಪೂರ್ವಾನಂದ್, ಬಿಹಾರ್ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದು ಬಳಿಕ ಪಟ್ನಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನೂ, ಪಿಎಚ್ಡಿಯನ್ನೂ ಪಡೆದಿದ್ದಾರೆ. ಮಗಧ ವಿಶ್ವವಿದ್ಯಾನಿಲಯಕ್ಕೆ ಸೇರಿದ ಪಟ್ನಾದ ಟಿಪಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಬಳಿಕ (1996-99) ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದಲ್ಲಿ ಉಪಪ್ರಾಧ್ಯಾಪಕರಾಗಿ ದುಡಿದು (2000-2004), ಆ ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದ ಹಿಂದಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ದುಡಿಯುತ್ತಾ, ತಮ್ಮ ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೊಸ ರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಶಾಲಾ ಶಿಕ್ಷಣಕ್ಕಾಗಿ 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಸಿದ್ಧಪಡಿಸಿದ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಪ್ರೊ. ಅಪೂರ್ವಾನಂದ್, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯ ಭಾರತೀಯ ಭಾಷಾ ಶಿಕ್ಷಣದ ರಾಷ್ಟ್ರೀಯ ಸಮಿತಿಯ ಸದಸ್ಯರೂ ಆಗಿದ್ದರು. ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ ಹೊಸ ದೂರದರ್ಶಿ ಯೋಜನೆಯನ್ನು ಸಿದ್ಧಪಡಿಸಲು ಪ್ರೊ. ಯಶಪಾಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಭಾರತದಲ್ಲಿ ಉನ್ನತ ಶಿಕ್ಷಣದ ನವೀಕರಣ ಹಾಗೂ ಪುನಶ್ಚೇತನದ ಸಲಹಾ ಸಮಿತಿಯಲ್ಲೂ ಕೆಲಸ ಮಾಡಿದ್ದರು. ಅಮೆರಿಕಾದ ಪೆನಿಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಭಾರತದ ಬಗ್ಗೆ ಉನ್ನತ ಅಧ್ಯಯನದ ಕೇಂದ್ರದಲ್ಲಿ ಸಂದರ್ಶಕ ವಿದ್ವಾಂಸರಾಗಿ 2010ರಲ್ಲಿ ಅವರು ನಿಯುಕ್ತರಾಗಿದ್ದರು. ಹಿಂದಿ ಸಾಹಿತ್ಯದಲ್ಲಿ ಮಾರ್ಕ್ಸ್ವಾದಿ ಮೀಮಾಂಸೆಯನ್ನು ಬೆಳೆಸುವ ಬಗ್ಗೆ ಪ್ರೊ. ಅಪೂರ್ವಾನಂದ್ ಅವರು ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಸುಂದರ್ ಕಾ ಸ್ವಪ್ನ (2001), ಸಾಹಿತ್ಯ ಕಾ ಏಕಾಂತ್, ತೀನ್ ಸೌ ರಾಮಾಯಣ್ (ಸಂಪಾದನೆ) (2008), ದಿ ಐಡಿಯಾ ಆಫ್ ಎ ಯುನಿವರ್ಸಿಟಿ ಮತ್ತು ಎಜುಕೇಶನ್ ಅಟ್ ದ ಕ್ರಾಸ್ರೋಡ್ಸ್ (2018) ಅವರ ಪ್ರಕಟಿತ ಕೃತಿಗಳು. ದಿ ವೈರ್ ಪತ್ರಿಕೆಗೆ ನಿಯತ ಅಂಕಣಕಾರರಾಗಿರುವ ಪ್ರೊ. ಅಪೂರ್ವಾನಂದ್ ಅವರು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸ್ಕ್ರಾಲ್, ಸತ್ಯ ಹಿಂದಿ, ಅಲ್ ಜಜೀರಾ ಮತ್ತಿತರ ಪತ್ರಿಕೆಗಳಲ್ಲಿ ಶಿಕ್ಷಣ, ಸಂಸ್ಕೃತಿ, ಮತೀಯವಾದ, ಹಿಂಸೆ ಮತ್ತು ಮಾನವ ಹಕ್ಕುಗಳ ಬಗ್ಗೆ ಆಗಾಗ ಬರೆಯುತ್ತಿರುತ್ತಾರೆ. ಭಾರತೀಯ ಟಿವಿ ವಾಹಿನಿಗಳಲ್ಲಿ ಉನ್ನತ ಶಿಕ್ಷಣ, ಭಾಷಾ ಜ್ಞಾನ ಹಾಗೂ ಮತೀಯವಾದಗಳ ಬಗ್ಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿರುತ್ತಾರೆ.