ಸುರತ್ಕಲ್: ಹೆಸರಾಂತ ವಿಹಾರ ತಾಣ ತಣ್ಣೀರುಬಾವಿ ಬೀಚ್ ನಿಂದ ಅನತಿ ದೂರದಲ್ಲಿರುವ ನಾಯರ್ ಕುದ್ರು ಮೂಲ ಸೌಕರ್ಯವಿಲ್ಲದೆ ಕಳೆದ 3 ದಶಕಗಳಿಂದ ಕುಗ್ರಾಮದಂತಿತ್ತು. ಮೀನುಗಾರಿಕೆಯನ್ನೇ ಅವಲಂಬಿಸಿರುವ ಗ್ರಾಮಸ್ಥರು ದ್ವೀಪದಂತಿದ್ದ ನಾಯರ್ ಕುದ್ರು ಅಭಿವೃದ್ಧಿಗಾಗಿ ಕಳೆದ 30 ವರ್ಷಗಳಿಂದ ಪಟ್ಟ ಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಿದೆ. ಸೇತುವೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ 3.5 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲು ಶುಕ್ರವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಭೂಮಿಪೂಜೆ ನೆರವೇರಿಸಿದ್ದು ಈ ವೇಳೆ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.
ಬೂತ್ ಅಧ್ಯಕ್ಷ ಸುಜಿತ್, ಸ್ಥಳೀಯ ಕಾರ್ಪೋರೇಟರ್ ಗಳಾದ ಸುನೀತಾ, ನಾಗರಾಜ್, ಉಷಾ, ನಾಗವೇಣಿ, ರೇವತಿ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.
ಸೇತುವೆ ನಿರ್ಮಾಣವಾಗದೆ ಸಮಸ್ಯೆಯಾಗಿತ್ತು
ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಸ್ಥಳೀಯರಾದ ನಾಗರಾಜ್, ಭಾರತಿ ಸುವರ್ಣ ಅವರು, “ನಾಯರ್ ಕುದ್ರು ಮಂಗಳೂರು ಪಟ್ಟಣಕ್ಕೆ ಸಮೀಪದಲ್ಲಿದ್ದರೂ ಇಲ್ಲಿ ಸೇತುವೆಯಿಲ್ಲದೆ ನಾವೆಲ್ಲರೂ ದ್ವೀಪದ ನಿವಾಸಿಗಳಂತೆ ಜೀವನ ಸಾಗಿಸುತ್ತಿದ್ದೆವು. ಕಳೆದ 30 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದು ಇಲ್ಲಿಯವರೆಗೆ ನ್ಯಾಯ ಸಿಕ್ಕಿರಲಿಲ್ಲ. ಈ ಬಾರಿ ಶಾಸಕ ಭರತ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ನಮ್ಮ ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ಅವರಿಗೆ ದೇವರ ಆಶೀರ್ವಾದ ಸದಾ ಇರಲಿ” ಎಂದರು.