ಸುಳ್ಯ : ಪಿಎಫ್ಐ ಪಾತಕಿಗಳಿಂದ ಹತ್ಯೆಯಾಗಿರುವ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಕಟ್ಟಿಕೊಟ್ಟಿರುವ ಮನೆಯ ಗೃಹಪ್ರವೇಶ ಇಂದು ನಡೆಯಲಿದೆ. ಹತ್ಯೆಗೀಡಾಗುವ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರ್ ಹೊಸ ಮನೆ ಕಟ್ಟುವ ಕನಸು ಹೊಂದಿದ್ದರು. ಈ ಕನಸನ್ನು ಬಿಜೆಪಿ ಹತ್ತೇ ತಿಂಗಳಲ್ಲಿ ಈಡೇರಿಸಿದೆ.
2022ರ ಜುಲೈ 26ರಂದು ರಾತ್ರಿ ಹತ್ಯೆಯಾದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಮನೆ ನಿರ್ಮಾಣದ ಕನಸು ಕಂಡಿದ್ದರು. ಪ್ರವೀಣ್ ಹತ್ಯೆ ವೇಳೆ ಬಿಜೆಪಿ ವರಿಷ್ಠರು ನೀಡಿದ್ದ ಭರವಸೆಯಂತೆ ಈ ಮನೆ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಮನೆಯ ನಿರ್ಮಾಣ ಕೆಲಸ ಕಾರ್ಯಗಳೆಲ್ಲವೂ ಮುಗಿದಿದ್ದು ಇಂದು ಗೃಹಪ್ರವೇಶ ನೆರವೇರಲಿದೆ.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ದ.ಕ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮನೆ ನಿರ್ಮಾಣವಾಗಿದೆ. 2022 ನವೆಂಬರ್ 2ರಂದು ಗೃಹ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಇದೀಗ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರ ಅಪೇಕ್ಷೆಯಂತೆ ಅವರು ನೀಡಿರುವ ನಕ್ಷೆಯಲ್ಲೇ 2,700 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದೆ.
ಈ ಮನೆಗೆ ಸುಮಾರು 70 ಲಕ್ಷ ರೂಪಾಯಿ ವೆಚ್ಚವಾಗಿದ್ದು ಸಂಪೂರ್ಣ ಖರ್ಚನ್ನು ಪಕ್ಷದ ವತಿಯಿಂದಲೇ ಭರಿಸಲಾಗಿದೆ. ಮನೆಗೆ ಪ್ರವೀಣ್ ನಿಲಯ ಎಂದು ಹೆಸರಿಡಲಾಗಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನಡೆಯಲಿದೆ. ಪ್ರವೀಣ್ ಸಮಾಧಿ ಬಳಿ ನಿರ್ಮಾಣಗೊಂಡಿರುವ ಪ್ರವೀಣ್ ನೆಟ್ಟಾರು ಪ್ರತಿಮೆಯೂ ಲೋಕಾರ್ಪಣೆಗೊಳ್ಳಲಿದೆ.
ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಸಂದೇಶ ನೀಡಲು ಬಿಜೆಪಿ ಮುಂದಾಗಿದೆ. ಪ್ರವೀಣ್ ಹತ್ಯೆ ಬಳಿಕ ತೀವ್ರ ಮುಜುಗರಕ್ಕೆ ಈಡಾಗಿದ್ದ ಬಿಜೆಪಿ ನಾಯಕರು ಈ ಮೂಲಕ ಮತ್ತೆ ಇಮೇಜ್ ಗಳಿಸಿಕೊಳ್ಳಲು ಮುಂದಾಗಿದ್ದಾರೆ. ಕಾರ್ಯಕರ್ತರನ್ನು ಎಂದಿಗೂ ಪಕ್ಷ ಬಿಟ್ಟು ಹಾಕುವುದಿಲ್ಲ ಎನ್ನುವುದಕ್ಕೆ ಪ್ರವೀಣ್ಗೆ ನಿರ್ಮಾಣಗೊಂಡಿರುವ ಮನೆಯೇ ಸಾಕ್ಷಿ ಎನ್ನುವುದು ಬಿಜೆಪಿ ಮುಖಂಡರ ಮಾತು.