ಮಂಗಳೂರು: ಬಿಜೆಪಿ ಪ್ರತಿ ಬಾರಿ ಚುನಾವಣೆ ಸಂದರ್ಭ ಹಿಂದುತ್ವ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಈ ಬಾರಿ ಪುತ್ತೂರು ಬಿಜೆಪಿ, ಸಂಘ ಪರಿವಾರದ ಸಂಘಟನೆಯೊಳಗೆ ಬಿರುಕು ಮೂಡಿದ್ದು, ಚುನಾವಣೆ ವೇಳೆ ಬಿಜೆಪಿ ಮುಖಂಡರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಏ.20ರಂದು ನಾಮಪತ್ರ ಸಲ್ಲಿಸುವುದಾಗಿ ಬಿಜೆಪಿ ದಕ್ಷಿಣ ಕನ್ನಡ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ತುಳುವಿನಲ್ಲಿ ಹಾಕಿದ್ದು, ಅದಕ್ಕೆ ಪರವಾಗಿ ಕಮೆಂಟ್ ಇರುವುದಕ್ಕಿಂತ ಹೆಚ್ಚಾಗಿ ವಿರೋಧಗಳೇ ತುಂಬಿವೆ. ನಾವು ಈ ಬಾರಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬೆಂಬಲ ನೀಡುವುದು. ಪುತ್ತಿಲ ಫಾರ್ ಪುತ್ತೂರು ಎಂಬ ಎಂಬ ಕಮೆಂಟ್ಗಳೇ ಬಹುಸಂಖ್ಯೆಯಲ್ಲಿವೆ. ಈ ನಿಟ್ಟಿನಲ್ಲಿ ಅರುಣ್ ಅವರಿಗೆ ಬಹುಸಂಖ್ಯೆ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಬೆಂಬಲ ದೊರೆತಿರುವುದು ಖಚಿತವಾದಂತಿದೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೂ ಇಲ್ಲಿ ಕಮೆಂಟ್ಗಳಿರುವುದನ್ನು ಗಮನಿಸಬಹುದು.
ಬಿಜೆಪಿ ಜಯಗಳಿಸಿದರೆ ಹಿಂದುತ್ವಕ್ಕೇನು ಬೆಂಬಲ ದೊರೆಯುವುದಿಲ್ಲ. ಆದರೆ ಅರುಣ್ ಪುತ್ತಿಲ ಜಯಗಳಿಸಿದರೆ ಹಿಂದುತ್ವಕ್ಕೆ ಶಕ್ತಿ ದೊರೆಯಲಿದೆ ಎಂಬ ಪ್ರತಿಕ್ರಿಯೆಗಳೂ ಇವೆ.
ಕಾರ್ಯಕರ್ತರ ಒಡನಾಟವಿಲ್ಲ: ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಸಂಘಟನೆ ವಿಷಯದಲ್ಲಿ ನೀಡಿದ ಕೊಡುಗೆ ಅಷ್ಟಕಷ್ಟೆ. ಅಲ್ಲದೆ ಅವರು ಕಡಬದವರು. ಇಲ್ಲಿನ ಕಾರ್ಯಕರ್ತರಿಗೆ ಅವರ ಒಡನಾಟವಿಲ್ಲ ಎಂಬ ಆರೋಪಗಳಿವೆ. ಈ ಬಗ್ಗೆ ಸ್ವತಃ ಅರುಣ್ ಪುತ್ತಿಲ ಹೇಳಿಕೆ ನೀಡಿದ್ದು, ಅವರು ಸ್ಪರ್ಧೆ ಮಾಡುತ್ತಿರುವ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಪುತ್ತೂರು ಭಾಗದಲ್ಲಿ ಅವರಿಗೆ ಕಾರ್ಯಕರ್ತರ ಸಂಪರ್ಕವಿಲ್ಲ ಎಂಬುದನ್ನು ಹೇಳಿದ್ದಾರೆ.
ಜಗದೀಶ್ ಕಾರಂತ ಭಾಷಣಕ್ಕೆ ಮೊರೆ: ಬಿಜೆಪಿ ಈ ಬಾರಿ ಪುತ್ತೂರಿನಲ್ಲಿ ಜಯಗಳಿಸುವುದು ಅಸಾಧ್ಯ ಎಂಬಂತಹ ಸ್ಥಿತಿಯಿದೆ. ಪುತ್ತಿಲ ನಾಮಿನೇಷನ್ಗೆ ಮೊದಲೇ ಅವರೊಂದಿಗೆ ಬಿ.ಎಲ್ ಸಂತೋಷ್ ಸಹಿತ ಆರ್ಎಸ್ಎಸ್ ಹಿರಿಯ ಮುಖಂಡರು ಸಂಧಾನ ನಡೆಸಿದ್ದರು. ಆದರೆ ಅದು ಫಲ ನೀಡಲಿಲ್ಲ. ಅಲ್ಲದೇ ಪುತ್ತಿಲ ಸಹಸ್ರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ ಪಾಳಯದ ಮುಖಂಡರ ಚಿಂತೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹಿಂದು ಮುಖಂಡ, ಹಿಂದು ಜಾಗರಣಾ ವೇದಿಕೆ ನಾಯಕ ಜಗದೀಶ ಕಾರಂತ ಅವರನ್ನು ಕರೆತರುವ ಪ್ರಯತ್ನವನ್ನು ಬಿಜೆಪಿ ಪಾಳಯ ನಡೆಸಿದೆ. ಆದರೆ ಕಾರಂತರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಿಂದು ಸಂಘಟನೆ ಮುಂಚೂಣಿ ನಾಯಕರಾಗಿದ್ದರೂ ಅವರು ಪಕ್ಷದ ಪ್ರಚಾರಕರಾಗಿ ಭಾಷಣ ಮಾಡುವುದಕ್ಕೆ ಒಪ್ಪುವುದಿಲ್ಲ ಎಂಬ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿದು ಸಂಘಟನೆ ವಿಚಾರ ನೆಪವಾಗಿಟ್ಟು ಪುತ್ತೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.