ಮಂಗಳೂರು: ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿಕೊಂಡು, ಓದಿನಲ್ಲಿ ಸಾಧನೆಗೈದು ಮುಂದೆ ಬಂದು ಒಂದಲ್ಲಾ ಒಂದು ದಿನ ತಾನು ಚಂದಮಾಮನನ್ನು ಮುಟ್ಟುವ ಕನಸನ್ನು ಕಟ್ಟಿಕೊಂಡಿದ್ದ ಸುಳ್ಯದ ಯುವತಿ ತನ್ನ ಬಾಲ್ಯದ ಕನಸನ್ನು ಕೊನೆಗೂ ಈಡೇರಿಸಿಕೊಂಡಿದ್ದಾಳೆ.
ಈಕೆಯ ಈ ಖುಷಿಗೆ ಪಾರವೇ ಇಲ್ಲದ್ದಂತಾಗಿದೆ. ಹೌದು. . . . ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ವಿದ್ಯಾರ್ಥಿನಿ ಮಾನಸ ಜಯಕುಮಾರ್ ಹಲವಾರು ಮಕ್ಕಳಿಗೆ ಈಗ ಸ್ಪೂರ್ತಿಯಾಗಿದ್ದಾರೆ.
ಚಂದ್ರಯಾನ 3 ಆರಂಭವಾಗುವ ಮುನ್ನ ಸಂಶೋಧನಾ ತಂಡದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ 900 ಮಂದಿ ಆಯ್ಕೆಯಾಗಿದ್ದರು. ಅಂತಿಮವಾಗಿ ಸೌಥರ್ನ್ ಕರ್ನಾಟಕದಿಂದ ಮಾನಸ ಜಯಕುಮಾರ್ ಸುಳ್ಯ ಇವರೋಬ್ಬರೇ ಆಯ್ಕೆ ಯಾಗಿದ್ದಾರೆ. ಇದು ಕರ್ನಾಟಕ್ಕೆ ಹೆಮ್ಮೆಯ ವಿಚಾರ.
ಚಂದ್ರಯಾನ-3ರಲ್ಲಿ ಮಾನಸ ಅವರು ಸಣ್ಣ ಸಮೂಹವನ್ನು ಹೊಂದಿದ್ದ ಸಿಗ್ನಲ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದು ‘ಚಂದ್ರನಿಂದ ಭೂಮಿಗೆ ಬರುವ ಸಿಗ್ನಲ್ಸ್ ಅನ್ನು ರವಾನಿಸುವ ಸಾಧನಾ ಆಂಟೇನಾವನ್ನು ವಿಜ್ಞಾನಿಗಳ ತಂಡ ಅಭಿವೃದ್ದಿಪಡಿಸಿತ್ತು. ಈ ಆ್ಯಂಟೇನಾವು ಸಂದೇಶ ಕಳಿಸುವುದಲ್ಲದೆ ಇತರ ಗ್ರಹಗಳಿಂದ ಆಗುವ ಸಂಭವನೀಯ ಅಪಾಯಗಳ ಮತ್ತಿತರ ಮಹತ್ತರ ಸಂದೇಶವನ್ನು ಭೂಮಿಗೆ ಕಳಿಸುತ್ತದೆ”. ಇದರಲ್ಲಿ ಮಾನಸ ಅವರು ಕಾರ್ಯ ನಿರ್ವಹಿಸಿ ಅಳಿಲು ಸೇವೆ ಮಾಡಿರುವುದು ಕರ್ನಾಟಕ್ಕೆ ಹೆಮ್ಮೆಯ ಸಂಗತಿ.
ಬಾಲ್ಯದಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಮಾನಸ ಅವರು ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿ ಬಿಎಸ್ಸಿ ಪದವಿ ಪಡೆದುಕೊಂಡರು. ಬಳಿಕ ಮಂಗಳೂರು ವಿವಿಯಿಂದ ಸಾಗರ ಭೂ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಪ್ರಸ್ತುತ ಪಿಹೆಚ್ ಡಿ ಅಧ್ಯಯನ ನಡೆಸುತ್ತಿದ್ದಾರೆ.
ಭವಿಷ್ಯದಲ್ಲಿ ವಿಜ್ಷಾನಿಯಾಗುವ ಕನಸನ್ನು ಇಟ್ಟುಕೊಂಡಿರುವ ಮಾನಸ ಅವರು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರಿಂದ ಪ್ರೇರಣೆಗೊಂಡಿದ್ದಾರೆ. ಆಕೆಯಂತೆ ತಾನು ಗಗನಯಾತ್ರಿ ಆಗುವೆ, ನಾನು ಅವರಷ್ಟು ದೈಹಿಕವಾಗಿ ಎತ್ತರವಿಲ್ಲ. ಆದರೂ ತನ್ನ ಪ್ರಯತ್ನ ಬಿಡುವುದಿಲ್ಲ. ತಾನು ವಿಜ್ಞಾನಿಯಾಗುವ ಕನಸನ್ನು ಈಡೇರಿಸಿಕೊಳ್ಳುವೆ ಎಂದಿದ್ದಾರೆ.