ಮಂಗಳೂರು: ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಕರಾವಳಿಯ ಉಡುಪಿ ಮತ್ತು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ನಡುವೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂಗೆ ಹೂ ಗುಚ್ಛ ನೀಡುವ ವಿಚಾರದಲ್ಲಿ ಇಬ್ಬರು ಕಾಂಗ್ರೆಸ್ ನಾಯಕಿಯರು ಕಿತ್ತಾಡಿಕೊಂಡಿರುವ ಘಟನೆ ವೈರಲ್ ಆಗಿದೆ.
ಆಗಿದ್ದೇನು: ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ತನ್ನ ಬೆಂಬಲಿಗರ ಜೊತೆ ಜೈ ಕಾರ ಹಾಕುತ್ತಾ ಸಿಎಂಗೆ ಹೂಗುಚ್ಛ ನೀಡಲು ಮುಂದೆ ಬಂದಿದ್ದಾರೆ. ಈ ವೇಳೆ ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡಬಂದಿದು, ಶಾಲೆಟ್ ಹತ್ತಿರ ಹೋಗದಂತೆ ತಡೆದಿದ್ದಾರೆ. ಶಾಲೆಟ್ ಸಿಎಂಗೆ ಹೂವಿನ ಮಾಲೆ ಹಾಕಲು ಬಂದ ವೇಳೆ ಕವಿತಾ ಸನಿಲ್ ದೂಡಿದ್ದು, ಇಬ್ಬರ ನಡುವಿನ ಕಿತ್ತಾಟಕ್ಕೆ ಸಾಕ್ಷಿ ಒದಗಿಸಿತು.
ಕವಿತಾ ಸನಿಲ್ ಮತ್ತು ಶಾಲೆಟ್ ಪಿಂಟೋ ನಡುವಿನ ಕಿತ್ತಾಟ ವಿಡಿಯೋದಲ್ಲಿ ದಾಖಲಾಗಿದೆ. ಸಿದ್ದರಾಮಯ್ಯ ಮಂಗಳೂರು ವಿಮಾನ ನಿಲ್ದಾಣದ ಒಳಗಿರುವ ವೇಳೆಯೇ ಶಾಲೆಟ್ ಪಿಂಟೋ ಅವರಿಗೆ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಸಿಎಂ ನಿಲ್ದಾಣದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿಯೂ ಇತರೇ ಕಾಂಗ್ರೆಸ್ ನಾಯಕರನ್ನು ಹಿಂದೆ ಸರಿಸಿ ಸಿದ್ದರಾಮಯ್ಯ ಅವರ ಹಿಂಭಾಗದಲ್ಲಿ ನಿಲ್ಲಲು ಕವಿತಾ ಸನಿಲ್ ಯಶಸ್ವಿಯಾಗಿದ್ದರು.