ಸುಬ್ರಹ್ಮಣ್ಯ: ನಿನ್ನೆ ಸಂಜೆ 5 ಗಂಟೆಯಿಂದ ಸುರಿದ ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಅಕ್ಷರಶಃ ನಲುಗಿ ಹೋಗಿದೆ. ಸುಬ್ರಹ್ಮಣ್ಯದ ಇತಿಹಾಸದಲ್ಲೇ ಈ ರೀತಿ ಮಳೆ ಸುರಿಯಲಿಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ.
ನಿನ್ನೆಯ ರಣಭಯಂಕರ ಮಳೆಗೆ ಆದಿಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದ್ದು, ದೇವಸ್ಥಾನವು ಮುಳುಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ದರ್ಪಣ ತೀರ್ಥ ನದಿಯ ನೀರು ಸುಬ್ರಹ್ಮಣ್ಯದ ಮುಖ್ಯ ದೇವಸ್ಥಾನಕ್ಕೂ ನುಗ್ಗಲು ಆರಂಭವಾಗಿದೆ.
ದೇವರಗದ್ದೆ ಹಾಗೂ ಮಾನಾಡಿನ ನದಿಗಳು ಉಕ್ಕಿ ಹರಿದು ಹಲವು ಮನೆಗಳು ಜಲಾವೃತಗೊಂಡಿದೆ, ನೂಚಿಲದ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಕುಮಾರಧಾರ ಸೇತುವೆ ಹೊರತು ಪಡಿಸಿ ಇನ್ನುಳಿದ ಎಲ್ಲ ಸೇತುವೆಗಳು ಮುಳುಗಡೆಯಾಗಿದ್ದಲ್ಲದೇ ಅಪಾಯ ಮಟ್ಟ ಮೀರಿದೆ. ಕುಮಾರಧಾರೆಯೂ ಮುಳುಗಡೆಯಾದರೆ ಯಾವುದೇ ರಸ್ತೆ ಸಂಪರ್ಕವಿಲ್ಲದೆ ಕುಕ್ಕೆ ಸುಬ್ರಹ್ಮಣ್ಯವು ದ್ವೀಪವಾಗುವ ಸಾಧ್ಯತೆಗಳಿವೆ.
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸುತ್ತಲಿನ ಪ್ರದೇಶದಲ್ಲಿ ನಾಗರ ಪಂಚಮಿಯ ಹಿಂದಿನ ದಿನ ಸುರಿಯುತ್ತಿರುವ ವರ್ಷಧಾರೆಗೆ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕುಕ್ಕೆ ಸುಬ್ರಹ್ಮಣ್ಯ ದೇಗುಲ ದರ್ಶನಕ್ಕೆ ಮುಂದಿನ ಎರಡು ದಿನ ಬಾರದಂತೆ ಮನವಿ ಮಾಡಿದೆ. ಎರಡು ದಿನಗಳ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಗುಡ್ಡ ಜರಿದು ಮನೆ ಕುಸಿತ: ಇಬ್ಬರು ಮಕ್ಕಳು ಸಾವು
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ದೊಡ್ಡ ಅನಾಹುತವೊಂದು ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದು ಇಬ್ಬರು ಮಕ್ಕಳು ಮಣ್ಣಿನೊಳಗೆ ಹೂತು ಹೋಗಿದ್ದರು. ಜೆಸಿಬಿ ಮೂಲಕ ತಡರಾತ್ರಿ ರಕ್ಷಣೆ ಕಾರ್ಯಚರಣೆ ನಡೆಸಲಾಗಿತ್ತು. 11 ವರ್ಷದ ಶ್ರುತಿ ಹಾಗೂ 8 ವರ್ಷದ ಗಾನಶ್ರೀ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಮನೆಯೊಳಗೆ ನಾಲ್ಕು ಮಂದಿ ಇದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರನ್ನು ರಕ್ಷಿಸಲಾಗಿದೆ.