ಮಂಗಳೂರು: ಭೂ ಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆಯಾಗಿರುವುದರಿಂದ ಮಂಗಳೂರು-ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿ ಮೇರೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರೈಲ್ವೆ ಸಚಿವರನ್ನು ಭೇಟಿಯಾಗಿ ಹೆಚ್ಚುವರಿ ರೈಲು ಓಡಿಸಲು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ರೈಲ್ವೆ ಮಂಡಳಿ ಹೆಚ್ಚುವರಿ ವಿಶೇಷ ರೈಲು ಓಡಿಸಲು ಅನುಮೋದನೆ ನೀಡಿದೆ.
ಮಂಗಳೂರು- ಬೆಂಗಳೂರು ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಜು. 26ರಿಂದ ಆ.31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು, ಕೆಂಗೇರಿ 8.49, ರಾಮನಗರ 9.13, ಚನ್ನರಾಯಪಟ್ಟಣ 9.24, ಮಂಡ್ಯ 9.54, ಮೈಸೂರು ಜಂಕ್ಷನ್ 11, ಕೃಷ್ಣರಾಜನಗರ 11.49, ಹೊಳೆನರಸೀಪುರ ಮಧ್ಯರಾತ್ರಿ 12.43, ಹಾಸನ 1.35, ಸಕಲೇಶಪುರ ಬೆಳಗ್ಗೆ 3.00, ಸುಬ್ರಹ್ಮಣ್ಯ ರೋಡ್ 6.10, ಕಬಕ ಪುತ್ತೂರು 7.00, ಬಂಟ್ವಾಳ 7.30, ಪಡೀಲ್ 8.25, ಮಂಗಳೂರು ಜಂಕ್ಷನ್ 8.13, ಮಂಗಳೂರು ಸೆಂಟ್ರಲ್ 09.05ಕ್ಕೆ ತಲುಪಲಿದೆ.
ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್ 6.48, ಪಡೀಲ್ 7.10, ಬಂಟ್ವಾಳ 7.20, ಕಬಕ ಪುತ್ತೂರು 7.48, ಸುಬ್ರಹ್ಮಣ್ಯ ರೋಡ್ ರಾತ್ರಿ 8.40, ಸಕಲೇಶಪುರ 9.20, ಹಾಸನ ಮಧ್ಯರಾತ್ರಿ 12.25, ಹೊಳೆನರಸೀಪುರ 1.13, ಕೃಷ್ಣರಾಜನಗರ 2.08, ಮೈಸೂರು ಜಂಕ್ಷನ್ ಬೆಳಗ್ಗೆ 3.00, ಮಂಡ್ಯ 3.54, ಚನ್ನರಾಯಪಟ್ಟಣ 4.30, ರಾಮನಗರ 4.42, ಕೆಂಗೇರಿ 5.11, ಬೆಂಗಳೂರು ಸಿಟಿ ಜಂಕ್ಷನ್ ಬೆಳಗ್ಗೆ 6.15ಕ್ಕೆ ತಲುಪಲಿದೆ.
ಕಣ್ಣೂರು-ಬೆಂಗಳೂರು ರೈಲಿಗೆ ಹೆಚ್ಚುವರಿ ಕೋಚ್ ಬೇಡಿಕೆ:
ಕಣ್ಣೂರು-ಬೆಂಗಳೂರು ರಾತ್ರಿ ರೈಲು ಪ್ರತಿದಿನ ಭರ್ತಿಯಾಗಿ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ರೈಲ್ವೆ ಹೋರಾಟಗಾರು ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜು.27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜು.26ರಿಂದ ಆ.30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರ್ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳೂರಿನಿಂದ ಪ್ರತಿ ಶನಿವಾರ ಈ ವಿಶೇಷ ರೈಲು ಸಂಚಾರ ಇರುವುದಿಲ್ಲ.