ಮೂಡುಬಿದಿರೆ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮೂಲತಃ ಮೂಡುಬಿದಿರೆಯವರಾದ ಅಬ್ದುಲ್ ನಝೀರ್ ಅವರು ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಸುಪ್ರೀಂ ನ್ಯಾಯಾಮೂರ್ತಿಗಳಾಗಿ ಆಯೋಧ್ಯೆ ತೀರ್ಪು, ತ್ರಿವಳಿ ತಲಾಕ್ ಸಹಿತ ಹಲವು ಪ್ರಮುಖ ಪ್ರಕರಣದಲ್ಲಿ ನ್ಯಾಯದಾನ ಮಾಡಿ ಗಮನಸೆಳೆದಿದ್ದರು. 2023 ಜನವರಿ 4ರಂದು ಸುಪ್ರೀಂ ಕೋರ್ಟ್ ನಿವೃತ್ತಿ ಹೊಂದಿದ್ದರು.
1958ರ ಜನವರಿ 5ರಂದು ಮೂಡುಬಿದಿರೆಯ ಬೆಳುವಾಯಿ ಕಾನದಲ್ಲಿ ಜನಿಸಿದ ಅವರು ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಬಿ.ಕಾಂ ಪದವಿ, ಮಂಗಳೂರಿನ ಎಸ್ಡಿಎಂ ಲಾ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. 1983ರಲ್ಲಿ ವಕೀಲ ವೃತ್ತಿಯನ್ನು ಆರಭಿಸಿದ ಅವರು, 2003ರಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ನಂತರ ಅವರು ಪೂರ್ಣಪ್ರಮಾಣದಲ್ಲಿ ನ್ಯಾಯಮೂರ್ತಿಯಾಗಿ ಭಡ್ತಿ ಹೊಂದಿದರು.
ಹೈಕೋರ್ಟ್ ನ್ಯಾಯಾದೀಶರಾಗಿರುವಾಗಲೇ 2017ರಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2017ರಲ್ಲಿ ತ್ರಿವಳಿ ತಲಾಕ್, 2019ರಲ್ಲಿ ಆಯೋಧ್ಯೆ ತೀರ್ಪು ಸಹಿತ ಮಹತ್ವದ ಪ್ರಕರಣಗಳಲ್ಲಿ ನ್ಯಾಯದಾನ ಮಾಡಿದ್ದಾರೆ. ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ 3ನೇ ರಾಜ್ಯಪಾಲರಾಗಿ ರಾಷ್ಟ್ರಪತಿ ನೇಮಿಸಿದ್ದಾರೆ.