ಹುಬ್ಬಳ್ಳಿ: ‘ಹಳೇಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ನ ಕಾಲುವೆ ಬಳಿಯ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ಗೋವುಗಳ ಹತ್ಯೆ ನಡೆಯುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬಜರಂಗದಳದ ಪದಾಧಿಕಾರಿಗಳು ಪೊಲೀಸ್ ಕಮಿಷನರ್ ರಮನ್ ಗುಪ್ತಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಧಾರವಾಡ ವಿಭಾಗದ ಸಂಚಾಲಕ ಶಿವಾನಂದ ಸತ್ತಿಗೇರಿ ನೇತೃತ್ವದಲ್ಲಿ ಮನವಿ ಸಲ್ಲಿಸಿರುವ ಅವರು, ‘ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವುಗಳ ಹತ್ಯೆ ನಡೆಯುತ್ತಿರುವುದು ಹಾಗೂ ಮಕ್ಕಳು ಸಹ ಅದರಲ್ಲಿ ನಿರತರಾಗಿರುವ ಕುರಿತು ಮಾಹಿತಿ ಇದೆ. ಅಲ್ಲಿರುವ 30ಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಿ, ಸಂಬಂಧಪಟ್ಟವರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು.
ಈ ಕುರಿತು ಕ್ರಮ ಕೈಗೊಳ್ಳದ ಕಸಬಾ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆ ಮೇಲೆ ದಾಳಿ ನಡೆಸಲಿದ್ದಾರೆ’ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.