ಮಂಗಳೂರು: ಕಳೆದ ವರ್ಷ ಭಾರಿ ಗಲಾಟೆಗೆ ಕಾರಣವಾಗಿ ಸದ್ಯ ತಣ್ಣಗಾಗಿರುವ ಹಿಜಾಬ್ ವಿವಾದ ಹೊಸ ರೂಪ ಪಡೆದುಕೊಂಡಿದೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಇದಾಗಲೇ ಕೆಲ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿಲ್ಲ .ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ವಿದ್ಯಾರ್ಥಿನಿಯರು ಕಾಲೇಜುಗಳಿಂದಲೇ ಟ್ರಾನ್ಸ್ಫರ್ ಸರ್ಟಿಫಿಕೇಟ್ (ಟಿಸಿ) ವಾಪಸ್ ಪಡೆದುಕೊಂಡಿದ್ದಾರೆ.
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಾಲೇಜಿಗಳಿಂದ ನೂರಾರು ವಿದ್ಯಾರ್ಥಿನಿಯರು ಟಿಸಿ ವಾಪಸ್ ಪಡೆದುಕೊಂಡಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಧಾರ್ಮಿಕ ಉಡುಗೆಗಳಿಗೆ ಅವಕಾಶ ಇಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟವಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಇಂಥದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹಿಜಾಬ್ ಅವಕಾಶ ಇಲ್ಲದಿರುವ ಕುರಿತು ಆಕ್ರೋಶ ಹೊರಹಾಕಿದ ಹೋರಾಟಗಾರ್ತಿ ಗೌಸಿಯಾ ಅವರು ಈಗ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣ ನೀಡಿ ರಾಜ್ಯ ಸರಕಾರ ಹಿಜಾಬ್ ಅವಕಾಶ ನೀಡುತ್ತಿಲ್ಲ. ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಮಾನವಾದ ಶಿಕ್ಷಣ ಒದಗಿಸಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ ಎಂದು ಕಿಡಿಕಾರಿದ್ದಾರೆ .
ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯ ನಿಲಯದಲ್ಲಿ ಬರುವ ವಿವಿಧ ಕಾಲೇಜಿಗಳಿಂದ ಶೇಕಡಾ 16ರಷ್ಟು ವಿದ್ಯಾರ್ಥಿನಿಯರು ವಿವಿಧ ಸರ್ಕಾರ ಕಾಲೇಜಿಗಳಿಂದ ಶೇಕಡ 34 ರಷ್ಟು ವಿದ್ಯಾರ್ಥಿನಿಯರು ಹಾಗೂ ಅನುದಾನಿತ ಕಾಲೇಜಿಗಳಿಂದ ಶೇಕಡ 8ರಷ್ಟು ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇಂಥದೊಂದು ನಿರ್ಧಾರ ಕರ್ನಾಟಕದ ಬಹುತೇಕ ಎಲ್ಲಾ ಕಾಲೇಜುಗಳಿಂದಲೂ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆಲ್ಲ ಕಾರಣ ಬಿಜೆಪಿಯ ಸಚಿವರಾದ ಬಿ ಸಿ ನಾಗೇಶ್ ಅವರೇ ಎಂದು ಗೌಸಿಯಾ ಆರೋಪಿಸಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಶೇಕಡ ಮೂವತ್ತರಷ್ಟು ವರ್ಗಾವಣೆ ಪತ್ರ ಪಡೆದಿರಬಹುದು ಇಲ್ಲವೇ ಡ್ರಾಪ್ ಔಟ್ ಆಗಿದ್ದಾರೆ ಇದಕ್ಕೆಲ್ಲಾ ಅವರೇ ಕಾರಣ ಎಂದಿದ್ದಾರೆ.