ಕುಂದಾಪುರ: ಅಶಕ್ತ ಬಡ ಕುಟುಂಬದವರ ಮಕ್ಕಳಿಗೆ ದಾನಿಗಳು ಉದ್ಯಮಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ವಿದ್ಯೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆದ ತ್ರಾಸಿ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಸಂಘದ ನಾಮಫಲಕ ಅನಾವರಣಗೊಳಿಸಿದರು.
ಕುಂದಾಪುರ ಶ್ರೀನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ, ಬೈಂದೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ ಎಲ್.ಪೂಜಾರಿ, ವಕೀಲರಾದ ಜೀವನ್ ಪ್ರಕಾಶ್ ತ್ರಾಸಿ, ಗಂಗೊಳ್ಳಿ ಠಾಣೆಯ ಪಿಎಸ್ಐ ವಿನಯ್ ಎಂ.ಕೊರ್ಲಹಳ್ಳಿ, ಸುರೇಶ ಪೂಜಾರಿ, ಬಿಲ್ಲವ ಸಂಘ ತ್ರಾಸಿ ಮತ್ತು ಬಿಲ್ಲವ ಮಹಿಳಾ ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಡಾ.ಗೋವಿಂದ ಬಾಬು ಪೂಜಾರಿ, ಪ್ರಗತಿಪರ ಕೃಷಿಕ ಕೃಷ್ಣ ಪೂಜಾರಿ ಅರಾಟೆ, ಹಿರಿಯ ಬಿಲ್ಲವ ಮುಂದಾಳು ಗಣಪ್ಪಯ್ಯ ಬಿಲ್ಲವ ತ್ರಾಸಿ, ಗೋವಾ ಉದ್ಯಮಿ ರವಿ ಡಿ.ಪೂಜಾರಿ, ಬೆಂಗಳೂರಿನ ಉದ್ಯಮಿ ಶಿವ ಆರ್.ಪೂಜಾರಿ, ಸಭಾಭವನದ ಮಾಲೀಕರಾದ ಮಹೇಶ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಮತ್ತು ಅಶಕ್ತರಿಗೆ ಸಹಾಯಧನ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಗೌರವ ಕಾರ್ಯದರ್ಶಿ ಸುರೇಶ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಸುರೇಶ ಪೂಜಾರಿ ಮತ್ತು ಲಕ್ಷ್ಮೀ ವಿಜಯ ಪೂಜಾರಿ ನಿರೂಪಿಸಿದರು. ಜಗದೀಶ ಪೂಜಾರಿ ದೇವಳಿ ವಂದಿಸಿದರು.