ಮಂಗಳೂರು: ಪರಧರ್ಮದ ಆಚಾರ ವಿಚಾರಗಳಿಗೆ ಅಗೌರವ ಎಸಗುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ಖಂಡನೀಯ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಹೇಳಿದ್ದಾರೆ.
ಈಶ್ವರಪ್ಪ ಅವರ ನಿಲುವು ಹಿಂದೂ ಧರ್ಮಕ್ಕೆ ಅಪಚಾರ ವೆಸಗಿದಂತೆ. ಹಿಂದೂ ಧರ್ಮದಲ್ಲೂ ಎಲ್ಲೂ ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ನುಡಿಯಲು ಎಲ್ಲಿಯೂ ಹೇಳಲಿಲ್ಲ. ದೇವರು ಎಲ್ಲರಿಗೂ ಒಂದೇ. ಅವರವರ ಧರ್ಮದಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ ಅಷ್ಟೇ. ಪರಮಾತ್ಮನನ್ನು ಅವಹೇಳನ ಮಾಡುವಂತಹ ಕೀಳುಮಟ್ಟದ ಹೇಳಿಕೆ ಕೊಡುವುದೆಂದರೆ ಅವರ ಘನತೆಗೆ ಯೋಗ್ಯವಲ್ಲದ ವಿಚಾರ ಮಾತ್ರವಲ್ಲ ಅವರ ಸಣ್ಣತನಕ್ಕೆ ನಿದರ್ಶನ. ಈ ವಿಚಾರದಲ್ಲಿ ಈಶ್ವರಪ್ಪರವರು ಅಲ್ಪಸಂಖ್ಯಾತ ಮುಸ್ಲಿಮರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇವರನ್ನು ಕೂಡಲೇ ಬಂಧಿಸಿ, ಕ್ರಮ ಕೈಗೊಳ್ಳುವಂತೆ ಸುಮತಿ ಹೆಗ್ಡೆ ಒತ್ತಾಯಿಸಿದ್ದಾರೆ.