ಮಂಗಳೂರು: ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ. ಆದರೆ ಬಿಜೆಪಿ ಇದನ್ನು ರದ್ದುಪಡಿಸದೇ ಈಗ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಬಿ ರಮಾನಾಥ ರೈ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗಾಡ್ಗೀಳ್ ವರದಿಯನ್ವಯ ಕಠಿಣ ಅರಣ್ಯ ಕಾಯ್ದೆ ತರಲು ಹೋದ ಸಂದರ್ಭದಲ್ಲಿ ಅರಣ್ಯ ಅಂಚಿನಲ್ಲಿರುವ ಕೆಲವರು ವಿರೋಧ ಮಾಡಿದಾಗ ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಯಿತು. ಗಾಡ್ಗೀಳ್ನಲ್ಲಿದ್ದ ಸರಿ ತಪ್ಪು ಸರಿಪಡಿಸಿ ವರದಿಯನ್ನು ಕೊಡಲು ಸಭೆ ಮಾಡಿತ್ತು. ಕಸ್ತೂರಿ ರಂಗನ್ ಅವರು ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ವಿಚಾರವಲ್ಲ, ಕೇರಳ, ಆಂಧ್ರಪ್ರದೇಶ, ತೇಲಂಗಾಣ, ಗೋವಾ ಹೀಗೆ ಎಲ್ಲಾ ರಾಜ್ಯಗಳಿಗೆ ಸೇರಿದ ವಿಚಾರವಾಗಿದ್ದ ಕಾರಣ ಅಂದು ಎಲ್ಲ ರಾಜ್ಯಗಳಿಗೆ ಕರಡು ನೋಟಿಫಿಕೇಶನ್ ನೀಡಲಾಯಿತು. ರಾಜ್ಯಗಳ ತಕರಾರು ಇದ್ದರೆ ಸೂಚಿಸಿ ಕಳುಹಿಸಿ ಕೊಡಿ ಎಂದು ಹೇಳಲಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಈ ಬಗ್ಗೆ ವಿಸ್ತಾರ ಚರ್ಚೆಯೂ ನಡೆಯಿತು ಎಂದರು. ಈಗಿರುವ ಅರಣ್ಯ ಕಾಯ್ದೆ ಬಹಳ ಕಠಿಣ ಇದೆ, ಇರುವ ನಿಯಮಾವಳಿಗಳು ಸಾಕು ಕಾಂಗ್ರೆಸ್ ಕಳಿಸಿತ್ತು. ನಾಲ್ಕೈದು ಬಾರಿಡ್ರಾಫ್ಟ್ ನೋಟಿಫಿಕೇಶನ್ ಬರುತ್ತಲೆ ಇತ್ತು. ಮೊದಲ ಬಾರಿ ಬಂದಾಗ ಜನರಲ್ಲಿ ಸರಿಯಾದ ಮಾಹಿತಿ ಇಲ್ಲದೆ ಗುಲ್ಲೆದ್ದಿತು. ಎನ್ಡಿಎ ಬಂದ ಮೇಲೆ ಕಾಂಗ್ರೆಸ್ ವರದಿ ಸರಿಯಾಗಿ ಕೊಟ್ಟಿಲ್ಲ ಎಂದು ಅಪಪ್ರಚಾರ ಮಾಡಿದರು. ಅಂತಿಮವಾಗಿ ಕಸ್ತೂರಿ ರಂಗನ್ ವರದಿಯೇ ಬೇಡ ಎಂದು ನಿರ್ಧರಿಸಿದೆವು. ಮತ್ತೆ ಡ್ರಾಫ್ಟ್ ನೊಟಿಫಿಕೇಶನ್ ಬಂತು. ಈಗಿನ ಸರ್ಕಾರ ಕೂಡ ವರದಿ ಬೇಡ ಅಂತ ವರದಿ ಕೊಟ್ಟಿದೆ ಎಂದರು. ಈ ವರದಿಯನ್ನು ಜಾರಿ ಮಾಡೋದು ಬಿಡೋದು ಕೇಂದ್ರ.
ವಿರೋಧ ಅಂದರೆ ಸಾಲದು ರದ್ದು ಮಾಡುವಲ್ಲಿ ಏನು ಕ್ರಮ ಕೈಗೊಂಡಿದ್ದಾರೆ..? ಡಬಲ್ ಎಂಜಿನ್ ಸರಕಾರ ಇರುವಾಗ ಕೇಂದ್ರ ಜತೆ ಮಾತನಾಡಿ ಕೇಂದ್ರ ಅರಣ್ಯ ಪರಿಸರ ಇಲಾಖೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಇನ್ನೂ ಕಸ್ತೂರಿ ರಂಗನ್ ವರದಿ ರದ್ದಾಗಿಲ್ಲ. ಆ ಸಮಸ್ಯೆ ಇನ್ನೂ ಜೀವಂತ ಇದೆ. ರಾಜ್ಯ ಸರ್ಕಾರ ವಿರೋಧ ಇದೆ ಎಂದ ಮಾತ್ರಕ್ಕೆ ರದ್ದಾಗಲ್ಲ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಿದಿರಿ. ರದ್ದು ಮಾಡಲು ಆಗದಿದ್ದರೆ ವರದಿ ಹೆಸರು ಹೇಳಿ ರಾಜಕೀಯ ಮಾಡೋದನ್ನ ನಿಲ್ಲಿಸಿ ಎಂದರು. ಅಂದು ಎತ್ತಿನಹೊಳೆ ಬೇಡ ಎಂದವರು ಈಗ ನಾವೇ ಅದನ್ನು ಮಾಡಿದ್ದು ಎನ್ನುತ್ತಿದ್ದಾರೆ. ಅದೇ ರೀತಿ ಇದನ್ನೂ ರದ್ದು ಮಾಡದೆ ಕೇವಲ ವಿರೋಧ ಇದೆ ಎನ್ನುವುದು ಸಂಪೂರ್ಣ ರಾಜಕೀಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಗಣೇಶ್ ಪೂಜಾರಿ, ಉಮೇಶ್ ದಂಡಕೇರಿ, ಅಪ್ಪಿ ಮೊದಲಾದರಿದ್ದರು.