ಮೈಸೂರು: ನಾಡಹಬ್ಬ ದಸರಾದಲ್ಲಿ ಆಯೋಜಿಸುತ್ತಿರುವ ಕಾರ್ಯಕ್ರಮಗಳ ನಡುವೆ ನಡೆಯುತ್ತಿರುವ ರಂಗೋತ್ಸವದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ.
ನಗರದ ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತರ ಶಿಲ್ಪವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಿಗೆ ರಂಗೋತ್ಸವ ಎಂಬ ಹೆಸರಿನಲ್ಲಿ ಅ.4 ರವರೆಗೆ ದಸರಾ ರಂಗೋತ್ಸವ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಅವರ ಹುಟ್ಟಿನಿಂದ ಹಿಡಿದು ಬಾಲ್ಯದ ಕೆಲವು ಆಯ್ದ ಕಾಲಘಟ್ಟಗಳ ಕುರಿತು ಮಾಹಿತಿಯುಳ್ಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದ್ದು, ಇದು ಗಮನಸೆಳೆಯುತ್ತಿದೆ.
ಹಳೇ ಮೈಸೂರನ್ನು ಸುಭಿಕ್ಷವಾಗಿರಿಸಿ, ಪ್ರಜೆಗಳ ಸೌಖ್ಯವನ್ನೇ ಬಯಸಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುವ ಕಾರ್ಯ ಶ್ಲಾಘನೀಯವಾಗಿದೆ. ಪ್ರದರ್ಶನದಲ್ಲಿ ದಸರಾ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮತ್ತು ಕಂಠೀರವ ನರಸಿಂಹರಾಜ ಒಡೆಯರ್ ರವರು ಕುಳಿತಿರುವುದು, ಜಯಚಾಮರಾಜ ಒಡೆಯರ್ ರವರ ಉಪನಯನ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಸರಾ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಸೆರೆ ಸಿಕ್ಕಿರುವ ಛಾಯಾಚಿತ್ರ, ಕುದುರೆ ಸವಾರಿ, ಆಯುಧಪೂಜೆ ಸಂದರ್ಭದಲ್ಲಿ ಪೂಜೆ ಮಾಡುತ್ತಿರುವ ದೃಶ್ಯ, ದಸರಾ ದರ್ಬಾರ್ ಹಾಗೂ ಜಂಬೂ ಸವಾರಿಯ ಚಿತ್ರಗಳು ಇತಿಹಾಸವನ್ನು ನೆನಪಿಸುತ್ತಿವೆ..
ಇನ್ನೊಂದು ವಿಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ, ಅವರ ಪತ್ನಿಯವರಾದ ಮಹಾರಾಣಿ ಪ್ರತಾಪ ರುದ್ರಕುಮಾರಿ, ಕಂಠೀರವ ನರಸಿಂಹರಾಜ ಒಡೆಯರ್ ರೊಂದಿಗೆ ದಿವಾನ್ ಮಿರ್ಜಾ ಇಸ್ಮಾಯಿಲ್ ಹಾಗೂ ಬ್ರಿಟಿಷ್ ಗಣ್ಯರೊಂದಿಗೆ ಶಿಕಾರಿಯ ಸಂದರ್ಭದಲ್ಲಿ ತೆಗೆದಿರುವಂತಹ ಛಾಯಾಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ. ಇಷ್ಟೇ ಅಲ್ಲದೆ ದಸರಾ ಕಲಾಪದಿಂದ ಹಿಡಿದು, ಮಹಾರಾಣಿ ಪ್ರತಾಪ ರುದ್ರಕುಮಾರಿಯವರು ಗೌರಿ ಪೂಜೆ ಮಾಡುತ್ತಿರುವ ದೃಶ್ಯವೂ ಇಲ್ಲಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಮಹೋತ್ಸವದ ಆಹ್ವಾನ ಪತ್ರಿಕೆಯಿಂದ ಹಿಡಿದು, ಉಪನಯನ, ವಿವಾಹ ಮಹೋತ್ಸವ, ಅವರ ಸೋದರಿಯವರಾದ ಜಯಲಕ್ಷ್ಮಮ್ಮಣ್ಣಿ ಮತ್ತು ಕೃಷ್ಣಾಜಮ್ಮಣ್ಣಿಯವರ ವಿವಾಹ ಮಹೋತ್ಸವದ ರಾಜರ ಕಾಲದ ಆಹ್ವಾನ ಪತ್ರಿಕೆಯ ಅಚ್ಚನ್ನು ಇಲ್ಲಿ ಡಲಾಗಿದೆ.
ಇದರೊಂದಿಗೆ ಮಹಾರಾಜರಿಗೆ ಸಾಕಷ್ಟು ಮನವಿಗಳು ಬರುತ್ತಿದ್ದು, ಅದರಲ್ಲಿ ಕೆಲವು ಆಯ್ದ ಮನವಿ ಪತ್ರಗಳು, ಅರ್ಜಿಗಳು ಹಾಗೂ ಟಿಪ್ಪಣಿಗಳ ಕುರಿತ ಚಿತ್ರ ಪ್ರದರ್ಶನವೂ ಇಲ್ಲಿದೆ. ಒಟ್ಟಾರೆ ಈ ಪ್ರದರ್ಶನ ಆಕರ್ಷಣೀಯವಾಗಿರುವುದಲ್ಲದೆ ಹತ್ತಾರು ವಿಚಾರಗಳನ್ನು ಚಿತ್ರ ಸಹಿತ ಮನದಟ್ಟು ಮಾಡುತ್ತಿರುವುದಂತು ನಿಜ.