ಮಂಗಳೂರು: ಮೋದಿ ಒಬ್ಬ ರಣಹೇಡಿ ಎಂದು ಸಾಬೀತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ
ಉತ್ತರ ನೀಡಲಾಗದೆ ರಣಹೇಡಿಯಂತೆ ವರ್ತಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕ ಮತ್ತು ರಾಜಕೀಯವಾಗಿ ಸಂಸತ್ತಿನ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ದೇಶದಲ್ಲಿ ನರಮೇಧಕ್ಕೆ ಕರೆ ಕೊಟ್ಟಿದ್ದವರು, ಕಾಲು ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ, ಪಾಕಿಸ್ತಾನಕ್ಕೆ ಓಡಿಸುತ್ತೇವೆಂದು ಹೇಳಿದ್ದವರ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆ ಆಡಳಿತ ಪಕ್ಷಗಳು ಸ್ವಯಂಪ್ರೇರಿತ ಕೇಸು ದಾಖಲಿಸಿ ಕ್ರಮ ಜರುಗಿಸುವ ಬದಲು ಕಾಂಗ್ರೆಸ್ ನವರಿಗೆ ಮಾತ್ರ ಈ ರೀತಿ ಮಾಡುವುದು ಕಾನೂನು ಏಕರೀತಿ ಇಲ್ಲವೇ ಎಂಬ ಪ್ರಶ್ನೆ ಬರುವಂತಾಗಿದೆ. ಮಹಾತ್ಮ ಗಾಂಧಿಯ ಕೊಂದಿದ್ದನ್ನು ಸಮರ್ಥಿಸುವುದು, ಗೋಡೆಯನ್ನು ಸಮರ್ಥಿಸಿದ್ದಕ್ಕೆ ಇವರು ಕ್ರಮ ಜರುಗಿಸಿಲ್ಲ.
ಚುನಾವಣೆ ಸಂದರ್ಭದಲ್ಲಿ ಮಾಡಿದ ಭಾಷಣ ಇವರಿಗೆ ಅತಿರೇಕ ಎನಿಸುತ್ತದೆ. ಕಳ್ಳನನ್ನು ಕಳ್ಳ ಎನ್ನುವುದು ಹೇಗೆ ತಪ್ಪಾಗುತ್ತದೆ ಎಂದು ಗೊತ್ತಾಗಲ್ಲ. ಗುಜರಾತಿನಲ್ಲಿ ಮೋರ್ಬಿ ಸೇತುವೆ ದುರಂತದಲ್ಲಿ 80 ಮಕ್ಕಳು ಸಹಿತ 180 ಜನ ಸತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ, ಅರೆಸ್ಟ್ ಮಾಡಿಲ್ಲ. ಅಲ್ಲಿನ ದುರಂತಕ್ಕೆ ನಾನು ಸಾಕ್ಷಿಯಾಗಿದ್ದೆ. ಮೋದಿ ನಿರಂಕುಶತ್ವ ರೀತಿಯಲ್ಲಿ ಹೋಗುತ್ತಿದ್ದಾರೆ, ರಾಹುಲ್ ಭಾಷಣದ ನೆಪದಲ್ಲಿ ಪ್ರಜಾಪ್ರಭುತ್ವದ ನೀತಿಗಳನ್ನು ಗಾಳಿಗೆ ತೂರಿದ್ದಾರೆ, ಸೂರತ್ ಕೋರ್ಟ್ ಆದೇಶ ಕೊಟ್ಟ ಮರು ದಿವಸವೇ ಅನರ್ಹಗೊಳಿಸಿದ್ದು ನೋಡಿದರೆ 56 ಇಂಚಿನವರಿಗೆ ಎಷ್ಟು ಭಯ ಇದೆಯೆಂದು ತಿಳಿಯುತ್ತದೆ, ಕೋರ್ಟ್ ಒಂದು ತಿಂಗಳ ಕಾಲ ತನ್ನ ಆದೇಶವನ್ನು ಅಮಾನತಿನಲ್ಲಿಟ್ಟಿದ್ದರೂ, ಲೋಕಸಭೆಯಿಂದ ಅನರ್ಹಗೊಳಿಸಿದ್ದು ಕಾನೂನು ದೃಷ್ಟಿಯಲ್ಲಿ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಬರುತ್ತದೆ. ಒಂದು ರಾಜಕೀಯ ಪಕ್ಷದ ಹಿರಿಯ ನಾಯಕನನ್ನು ಈ ರೀತಿ ಅನರ್ಹ ಮಾಡಿದ್ದು ಸರ್ವಾಧಿಕಾರಿ ವರ್ತನೆಗೆ ಸಾಕ್ಷಿಯಾಗಿದೆ.
ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದರೆ, ಮೈಕ್ ಆಫ್ ಮಾಡುತ್ತಾರೆ. ಹಾಗಾದರೆ, ಅದಾನಿಯವರು ಲೂಟಿ ಮಾಡಿದ್ದು ಇಲ್ಲವೇ, ಜೆಪಿಸಿ ಮಾಡಬೇಕೆಂದು ಕಾಂಗ್ರೆಸ್ ಕೇಳಿದ್ದು ತಪ್ಪಾಗುತ್ತದೆಯೇ.. ಇವರೇನು ಭ್ರಷ್ಟಾಚಾರದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಲ್ಲ, ಚುನಾವಣೆ ಭಾಷಣದ ಕಾರಣಕ್ಕೆ ಸೇಡಿನ ಕ್ರಮವಾಗಿ ಈ ರೀತಿ ಮಾಡಿದ್ದಾರೆ. ಲೋಕಸಭೆಯಲ್ಲಿ ಮೈಕ್ ಆಫ್ ಮಾಡುವುದು ಪ್ರಜಾಪ್ರಭುತ್ವ ಬುಡಮೇಲು ಮಾಡಿರುವುದರ ಸಂಕೇತ ಎಂದರು ಹರಿಪ್ರಸಾದ್.
ಇಂತಹದ್ದೇ ಸಂದರ್ಭ ಎದುರಾದ ವೇಳೆ ಕಾಂಗ್ರೆಸ್ ಯಾಕೆ ಕೋರ್ಟ್ ಮೆಟ್ಟಿಲೇರಿಲ್ಲ, ಬಿಜೆಪಿ ನಾಯಕರ ಅತಿರೇಕದ ಹೇಳಿಕೆಗೆ ನೇರ ಏಕ್ಷನ್ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜನಸಾಮಾನ್ಯರ ಕೋರ್ಟ್ ಮೇಲೆ ಹೋಗುತ್ತೇವೆ, ಯಾರೋ ಒಬ್ಬರ ಮೇಲೆ ಕೋರ್ಟ್ ಕೇಸು ಹಾಕುವುದು, ಕಿರುಕುಳ ಕೊಡುವುದು ನಮ್ಮಜಾಯಮಾನ ಅಲ್ಲ ಎಂದರು. ಗುಜರಾತಿನ ಕೋರ್ಟ್ ಯಾವ ಸ್ಥಿತಿಗೆ ಮುಟ್ಟಿದೆ ಎಂಬುದಕ್ಕೆ ಬಿಲಿಸ್ ಬಾನು ಪ್ರಕರಣ ಸಾಕ್ಷಿ. 14 ಜನ ಅತ್ಯಾಚಾರ ಮಾಡಿದ್ದಾರೆ, ಮಗುವನ್ನು ಕೊಂದಿದ್ದಾರೆ, ಆದರೆ ಕೋರ್ಟ್ ಅವರನ್ನೆಲ್ಲ ನಿರಪರಾಧಿಗಳು ಎಂದು ಬಿಡುಗಡೆ ಮಾಡುತ್ತದೆ. ಗುಜರಾತಿನ ಕೋರ್ಟ್ ಯಾವ ರೀತಿ ಇದೆ ಎಂಬುದಕ್ಕಿದು ಸಾಕ್ಷಿ. ಅಲ್ಲಿನ ನ್ಯಾಯಾಂಗದಲ್ಲಿ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಯನ್ನು ಬಿಚ್ಚಿ ಬಿಟ್ಟಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ಮೀಸಲಾತಿ ಘೋಷಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿ ಸರ್ಕಾರ ಮೀಸಲಾತಿಯಲ್ಲಿ ಗೊಂದಲ ಉಂಟು ಮಾಡುತ್ತಿದೆ, ಆಮೂಲಕ ಮೀಸಲು ಪದ್ಧತಿಯನ್ನೇ ರದ್ದುಗೊಳಿಸುವ ಹುನ್ನಾರ ಹೊಂದಿದೆ, ಬಿಹಾರದಲ್ಲಿ 2015 ರಲ್ಲಿ ಮೋಹನ್ ಭಾಗವತ್ ಅವರು ಮೀಸಲು ರದ್ದುಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಆಗ ಲಾಲೂ ಪ್ರಸಾದ್ ಯಾದವ್ ಒಬ್ಬರೇ ಅದನ್ನು ಎದುರಿಸಿ ಬಿಜೆಪಿಯನ್ನು ಸೋಲಿಸಿದ್ದರು. ಹಿಂದೆ ತಮಿಳುನಾಡಲ್ಲಿ ಇದೇ ರೀತಿ 69 ಪರ್ಸೆಂಟ್ ನೀಡಲು ಹೊರಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಸಂಸತ್ತಿನಲ್ಲಿ ಇದೆಲ್ಲ ನಡೆಯಲ್ಲ ಬಿದ್ದು ಹೋಗುತ್ತದೆ. ಜನರ ಮೂಗಿಗೆ ತುಪ್ಪ ಹಚ್ಚುವುದಲ್ಲ, ಬಿಜೆಪಿಯವರು ಈಗ ತಲೆಯ ಮೇಲೆ ತುಪ್ಪ ಹಚ್ಚಿದಾರೆ ಎಂದು ಲೇವಡಿ ಮಾಡಿದರು.