ಮಂಗಳೂರು: ಕರಾವಳಿಯಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದ್ದ ‘ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ ಯತ್ನ’ ವದಂತಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಇದು ಕೇವಲ ವದಂತಿಯಾಗಿದೆ, ಇದರಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ.
‘ಹಲ್ಲೆ’ ನಡೆದಿದೆ ಎನ್ನಲಾದ ವ್ಯಕ್ತಿಯನ್ನು ವಿಚಾರಿಸಲಾಗಿದೆ. ಈ ಬಗ್ಗೆ ಆ ವ್ಯಕ್ತಿಯೇ ಇದೊಂದು ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಳ್ಳಾಲದ ಬಿಜೆಪಿ ಕಾರ್ಯಕರ್ತರೋರ್ವರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅವರ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ಯತ್ನ ನಡೆಸಿದ್ದರು ಎಂದು ಹಬ್ಬುತ್ತಿರುವ ಸುದ್ದಿ ಈಗಷ್ಟೇ ತಣ್ಣಗಾಗುತ್ತಿರುವ ಕರಾವಳಿಯಲ್ಲಿ ಮತ್ತೆ ಕಾವೇರಲು ಕಾರಣವಾಗಿತ್ತು. ಈ ವದಂತಿ ಹರಡಿದವರ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.