ಮಂಗಳೂರು: ಕರಾವಳಿಯೇ ಸಂಭ್ರಮಪಡುವ ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ ಮಂಗಳೂರು ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮೈಸೂರು ದಸರಾವನ್ನು ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇತ್ತೀಚೆಗೆ ತೀರ್ಮಾನಿಸಿದ ಬೆನ್ನಿಗೆ ಇದೀಗ ಮಂಗಳೂರು ದಸರಾವನ್ನು ಕೂಡ ಅದ್ದೂರಿ ಆಚರಣೆಗೆ ಕೇಂದ್ರ ಮಾಜಿ ಸಚಿವ , ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಮಿತಿ ನಿರ್ಧರಿಸಿವೆ
ಕಳೆದ 2ವರ್ಷಗಳಿಂದ ಕೋರೋಣ ನೆಪದಿಂದ ಸಾಂಕೇತಿಕವಾಗಿ ಆಚರಣೆಯಾಗುತ್ತಿದ್ದ ದಸರಾವನ್ನು ಈ ಬಾರಿ ವಿಜ್ರಂಭಣೆಯಿಂದ ಆಚರಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಹೊಸ ಚೇತರಿಕೆ ಹಾಗೂ ಲಕ್ಷಾಂತರ ಮಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಲಿದೆ . ಸೆಪ್ಟೆಂಬರ್ ತಿಂಗಳಲ್ಲಿ ಹತ್ತು ದಿನಗಳ ಪರ್ಯಂತ ವಿಶೇಷ ಹಾಗೂ ವಿಭಿನ್ನ ಕಾರ್ಯ ಕಲಾಪಗಳ ಮೂಲಕವಾಗಿ ದಸರಾ ಸಡಗರಕ್ಕೆ ಮಂಗಳೂರು ಆಕರ್ಷಕ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕುದ್ರೋಳಿ ಹಾಗೂ ಮಂಗಳೂರು ಜಮಾ ಜಗಮಗಿಸಲಿದೆ . ನವರಾತ್ರಿ ವೇಳೆಯಲ್ಲಿ ಪೂಜಿಸಲ್ಪಡುವ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ರಚನೆ ಕೆಲಸಗಳು ಗಣೇಶೋತ್ಸವದ ದಿನದಂದು ಮುಹೂರ್ತ ಕಾಣಲಿದೆ
ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾಗಿ ವಿನ್ಯಾಸದ ಸ್ವರೂಪದ ಕಲಾಮಂಟಪ ತಯಾರಿಯೂ ನಡೆಯಲಿದೆ. ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಶ್ರೀದೇವಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರವಣಿಗೆಯಿಂದ ಒಯ್ದರೆ ಮಂಗಳೂರಿನ ದಸರಾದಲ್ಲಿ ಶಾರದಾಂಬೆಯ ಉತ್ಸವಮೂರ್ತಿಯೊಂದಿಗೆ ನವದುರ್ಗೆಯರು ಗಣಪತಿ ವಿಗ್ರಹವನ್ನು ವಾಹನದ ಮೂಲಕ ಶೋಭಾ ಯಾತ್ರೆ ನಡೆಸಲಾಗುತ್ತದೆ . 2ವರ್ಷದಿಂದ ಶೋಭಾಯಾತ್ರೆ ಆಗಿರಲಿಲ್ಲ ಈ ಬಾರಿ ವರ್ಣಮಯ ದಸರಾ ಮೆರವಣಿಗೆಯ ಸಂಕಲ್ಪವಿದೆ , ಲಕ್ಷಾಂತರ ಜನ ಸಾಗರ ಸೇರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ
ಸಾಂಪ್ರದಾಯಿಕ ಆಚರಣೆಗಳ ಮೂಲಕ ಜಗತ್ತಿನ ಕಣ್ಮನ ಸೆಳೆದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಯೂ , ಈ ಬಾರಿ ದಸರಾ ಸಡಗರ ವಿಜ್ರಂಭಣೆಯಿಂದ ಕೂಡಲಿದೆ.
ಭಕ್ತರ ಸಮ್ಮಿಲನಕ್ಕೆ ಕಾರಣವಾಗುವ ಮಾದರಿಯಲ್ಲಿ ಎಲ್ಲ ಕ್ಷೇತ್ರಗಳ ದಸರಾ ಆಚರಣೆಯನ್ನು ವೈಭವದಿಂದ ಆಚರಿಸಲು ಈಗಾಗಲೇ ಪ್ರಾರಂಭಿಕ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಶೃಂಗಾರಗೊಳ್ಳುವ ಮಂಗಳೂರು ನಗರ ವಿದ್ಯುತ್ ದೀಪಾಲಂಕಾರ 4ದಿಕ್ಕುಗಳಿಂದಲೂ ಕೇಳುವ ಹುಲಿ ಕುಣಿತದ ತಾಸೆಯ ಶಬ್ದ ಉತ್ಸವದುದ್ದಕ್ಕೂ ನಗರವನ್ನು ಹಬ್ಬದ ಮನೆಯನ್ನಾಗಿಸಲಿದೆ.