ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.7 ಮತ್ತು 8ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಸ್ಯಜಾತ್ರೆ ಆಯೋಜಿಸಲಾಗಿದೆ.
ಸರಳ ಮತ್ತು ಸುಲಭ ಕೃಷಿ ವಿಧಾನಗಳೊಂದಿಗೆ ಕೃಷಿಯಲ್ಲಿ ಸಮಸ್ಯೆ, ಸಂಕಷ್ಟ ದೂರ ಮಾಡಿ, ಉತ್ಪನ್ನಗಳ ಮೌಲ್ಯವರ್ಧನೆಯೊಂದಿಗೆ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ಹುಟ್ಟಿಸಿ ಮುಂದಿನ ಜನಾಂಗ ಕೃಷಿಯನ್ನು ಅನುಸರಿಸಿಕೊಂಡು ಹೋಗಲು ಆರೋಗ್ಯಕ್ಕಾಗಿ ಕೃಷಿ, ಅಲಂಕಾರಕ್ಕಾಗಿ ಕೃಷಿ ಎಂಬ ಮಹದಾಶಯದೊಂದಿಗೆ ಸುದ್ದಿ ಕೃಷಿ ಸೇವಾ ಕೇಂದ್ರ ಅಸ್ತಿತ್ವಕ್ಕೆ ಬಂದಿದೆ.
ಕೃಷಿಕರಿಗೆ ನೆರವಾಗುವ ದೃಷ್ಟಿಕೋನದಿಂದ ಸುದ್ದಿ ಮಾಹಿತಿ ಟ್ರಸ್ಟ್ ಆಶ್ರಯದಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಕೃಷಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು, ಬಂಟ್ವಾಳ ಹಾಗೂ ಮಂಗಳೂರಿನಲ್ಲೂ ಕೇಂದ್ರ ಆರಂಭಗೊಳ್ಳಲಿದೆ. ಸುದ್ದಿ ಕೃಷಿ ಸೇವಾ ಕೇಂದ್ರದ ಮುಂದುವರಿದ ಯೋಜನೆಗಳ ಭಾಗವಾಗಿ ಪುತ್ತೂರಿನಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯ ಕೃಷಿ ವಿಚಾರ ಸಂಕಿರಣ ಹಾಗೂ ಗಿಡಗಳ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ಸಸ್ಯ ಜಾತ್ರೆ ಏರ್ಪಡಿಸಲಾಗಿದೆ.
ಜ. 7ರಂದು ಬೆಳಿಗ್ಗೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಸಸ್ಯ ಜಾತ್ರೆಯ ಜಾಥಾಗೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸಮಾವೇಶಗೊಂಡು 9.30ಕ್ಕೆ ಮೆರವಣಿಗೆಗೆ ಚಾಲನೆ ನೀಡಲಾಗುವುದು, ಮುಖ್ಯ ಬಸ್ ನಿಲ್ದಾಣದ ಮೂಲಕ ಸಾಗಿ ಎಮ್.ಟಿ ರಸ್ತೆಯ ಮೂಲಕ ಮೆರವಣಿಗೆ ಮಿನಿ ವಿಧಾನ ಸೌಧ ತಲುಪಲಿದೆ. ಅಲ್ಲಿಂದ ಎಲ್ಲರೂ ಒಟ್ಟಾಗಿ ಕಿಲ್ಲೆ ಮೈದಾನದಲ್ಲಿ ಸ್ಟಾಲ್ ಗಳ ವೀಕ್ಷಣೆ ನಡೆಸಲಿದ್ದಾರೆ. ಆಕರ್ಷಕ ಕಲಾತಂಡಗಳು ಮೆರವಣಿಗೆಯ ಮುಂಚೂಣಿಯಲ್ಲಿ ಇರಲಿವೆ. ಬೆಳಿಗ್ಗೆ ಮಳಿಗೆಗಳ ಉದ್ಘಾಟನೆಗೊಳ್ಳಲಿದೆ. ಜಾಥಾ ತಲುಪಿದ ಬಳಿಕ ಸಸ್ಯ ಜಾತ್ರೆಯ ಉದ್ಘಾಟನೆ ನಡೆಯಲಿದೆ. ಜ.7 ಹಾಗು 8ರಂದು ಹಲವಾರು ವಿಷಯಗಳಲ್ಲಿ ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದೆ.
ಜ. 7ರಂದು ಅಪರಾಹ್ನ 2ರಿಂದ ವಿವಿಧ ತಜ್ಞರಿಂದ ಟೆರೇಸ್ ಗಾರ್ಡನ್ನಲ್ಲಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಔಷಧೀಯ ಸಸ್ಯಗಳು ಮತ್ತು ಮೀನು ಕೃಷಿ ಕುರಿತು ವಿಚಾರ ಸಂಕಿರಣ ನಡೆಯಲಿದೆ. ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಜ. 8ರಂದು ಬೆಳಿಗ್ಗೆ ಅಡಿಕೆ ಕೃಷಿಯ ಸಮಸ್ಯೆಗಳು, ಅಡಿಕೆಗೆ ಪರ್ಯಾಯ ಕೃಷಿ, ಜೇನು ಕೃಷಿ, ಅಪರಾಹ್ನ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಸಾಧಕರಿಂದ ಸಂವಾದ ನಡೆಯಲಿದೆ. ಸಂಜೆ 4ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ರಾತ್ರಿ 9.30ರವರೆಗೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.