ಬೆಳ್ತಂಗಡಿ: ದೇವರ ಮೇಲಿನ ಭಕ್ತಿ ಮನುಷ್ಯನ ಯೋಚನೆ,ಯೋಜನೆಯನ್ನು ಬದಲಿಸುತ್ತೆ. ದೇವರ ದರುಶನಕ್ಕೆ ಕಠಿಣ ವೃತಾಚರಣೆ ಮಾಡುವವರಿದ್ದಾರೆ. ಇವರೆಲ್ಲರ ನಡುವೆ ಕಳಸದ ಹಿರೇಬೈಲ್ ನ ಶ್ರೇಯಾಂಸ್ ಜೈನ್ ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮನೆಯ ಮೊದಲ ಗೀರ್ ಕರುವನ್ನು ಧರ್ಮಸ್ಥಳಕ್ಕೆ ಅರ್ಪಿಸುತ್ತೇನೆಂಬ ಮನದ ಪ್ರಾರ್ಥನೆಯನ್ನು ಎರಡು ವರ್ಷಗಳ ನಂತರ ಬರೋಬ್ಬರಿ 360 ಕಿಲೋಮೀಟರ್ ಗೀರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ,ವೀರೇಂದ್ರ ಹೆಗ್ಗಡೆಯವರು ಗೀರ್ ಎತ್ತಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು.
ಜಾನುವಾರು ಅಂದ್ರೆ ಶ್ರೇಯಾಂಸ್ ಗೆ ಅಚ್ಚುಮೆಚ್ಚು ಬೆಂಗಳೂರಿನ ಜಿಗಣಿಯಲ್ಲಿ ಲಾಕ್ ಡೌನ್ ವೇಳೆ ದನ ಸಾಕಿದ ಶ್ರೇಯಾಂಸ್ ದೊಡ್ಡ ಕಂಪೆನಿಯ ಉದ್ಯೋಗವಿದ್ದರೂ ಹೈನುಗಾರಿಕೆ ಮೇಲೆ ಆಸಕ್ತಿ ಕಳಸದ ಶ್ರೇಯಾಂಸ್ ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. 2019ರಲ್ಲಿ ಬಂದೆರಗಿದ ಕೊರೊನಾ ಮಹಾ ಮಾರಿಯಿಂದಾಗಿ ಲಾಕ್ ಡೌನ್ ಆಗಿದ್ದರಿಂದ, ಇವರಿಗೆ ವರ್ಕ್ ಫ್ರಂ ಹೋಮ್ ಪದ್ಧತಿ ಜಾರಿಯಾಗಿತ್ತು. ಹೀಗಿರುವಾಗಲೇ ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕುವ ಯೋಚನೆಯನ್ನು ಮಾಡಿದ್ರು. ಖಾಲಿ ಸೈಟ್ ನಲ್ಲೇ ದನ ಸಾಕಲು ಮುಂದಾಗಿ ಹೈನುಗಾರಿಕೆಗೆ ಮುಂದಡಿಯಿಟ್ಟರು.
ಮಂಜುನಾಥ ಸ್ವಾಮಿಗೆ ಮೊದಲ ಕರು ಭೀಷ್ಮನನ್ನು ಅರ್ಪಿಸುವ ಸಂಕಲ್ಪ ಕರು ಎತ್ತು ಆದಾಗ ನಡೆದುಕೊಂಡು ಬಂದು ಅರ್ಪಿಸಲು ಚಿಂತನೆ: ಬೆಂಗಳೂರಿನಲ್ಲಿ ಹೈನುಗಾರಿಕೆ ಆರಂಭಿಸಿದ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಕರುವನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಬೇಕೆಂದು ಮನದಲ್ಲಿ ಅಂದುಕೊಂಡರು. ಒಂದು ವರ್ಷದೊಳಗೆ ಮೊದಲ ಗಂಡು ಕರು ಭೀಷ್ಮನನ್ನು ಕ್ಷೇತ್ರಕ್ಕೆ ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ ಎತ್ತಿಗೆ 1 ವರ್ಷ ಎಂಟು ತಿಂಗಳುಗಳಾದಾಗ ಕ್ಷೇತ್ರಕ್ಕೆ ನಡೆದುಕೊಂಡೇ ಬಂದು ಅರ್ಪಿಸುವ ಚಿಂತನೆ ಮಾಡಿದ್ರು. ಇದಕ್ಕಾಗಿ ಸುಮಾರು ತಿಂಗಳುಗಳ ಪೂರ್ವಭಾವಿ ಚಿಂತನೆ,ರೂಪುರೇಷೆ ಕೈಗೊಂಡಿದ್ದರು.
ತಾನು ಹೋಗುವಲ್ಲಿ ಎತ್ತು ನಡೆಯುವುದಲ್ಲ,ಎತ್ತು ಹೋದಲ್ಲಿ ತಾನು ಹೋಗುವ ನಿರ್ಧಾರ ಎತ್ತನ್ನು ದೇವರೆಂದು ನಂಬಿರುವ ಶ್ರೇಯಾಂಸ್,ಭೀಷ್ಮನ ಬೇಡಿಕೆಗಳಿಗೆ ಮೊದಲ ಆದ್ಯತೆ ಭೀಷ್ಮನಿಗೆ ಸುಸ್ತಾದರೆ,ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರ ಬೆಂಗಳೂರಿನ ಜಿಗಣಿಯಿಂದ ಮುಖ್ಯರಸ್ತೆಯಲ್ಲೇ ಸಾಗಿಬರುವುದಾದರೇ ಎತ್ತಿಗೆ ಆಹಾರದ ವ್ಯವಸ್ಥೆ ಸರಿಯಾಗಿ ಆಗುವುದಿಲ್ಲ. ಎತ್ತು ಹಳ್ಳಿರಸ್ತೆಗಳಲ್ಲಿ ನಡೆದು ಸಾಗಿದರೆ ಸುತ್ತಮುತ್ತಲು ಹುಲ್ಲು ಸಿಗುತ್ತದೆ.ಇದರಿಂದ ಭೀಷ್ಮನಿಗೂ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಗರಿಷ್ಠ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹಾದು ಬಂದಿದ್ದಾರೆ. ಹೀಗೆ ಬರುವ ವೇಳೆ ಭೀಷ್ಮನಿಗೆ ಸುಸ್ತಾದರೆ ಅಥವಾ ನಡೆದಾಡಲು ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರವನ್ನು ಕೈಗೊಂಡೇ ನಡಿಗೆಯನ್ನು ಆರಂಭ ಮಾಡಿದ್ದರು.
360 ಕಿಲೋಮೀಟರ್ ಬರೋಬ್ಬರಿ 36 ದಿನದ ಪ್ರಯಾಣ
ಕಚೇರಿಗೆ ಶ್ರೇಯಾಂಸ್ ಒಂದು ದಿನವೂ ಹಾಕಿಲ್ಲ ರಜೆ! ಮುಂಜಾನೆ ಹೊತ್ತಲ್ಲಿ ನಡಿಗೆ ನಂತರ ವರ್ಕ್ ಫ್ರಂ ಹೋಮ್ ನಡಿ ಕೆಲಸ ಭೀಷ್ಮನೊಂದಿಗಿನ ನಡಿಗೆ ಬಗ್ಗೆ ಆರಂಭದಲ್ಲಿ ಶ್ರೇಯಾಂಸ್ ಗೂ ಕೂಡ ಚಿಕ್ಕ ಅಳುಕಿತ್ತು. ಅದಕ್ಕಾಗಿ ಮೊದಲೆರಡು ದಿನ ಗೆಳೆಯನೂ ಶ್ರೇಯಾಂಸ್ ಗೆ ಸಾಥ್ ನೀಡಿದ್ದ, ಆದರೆ ಭೀಷ್ಮನ ಸಹಕಾರ ಮತ್ತು ತಾಳ್ಮೆಯುತ ವರ್ತನೆ ನೋಡಿದ ನಂತರ ಶ್ರೇಯಾಂಸ್ ತೊಂದರೆಯಾಗುವುದಿಲ್ಲ ಎಂದು ಸಾಬೀತಾಯ್ತು. ಸತತ 36 ದಿನಗಳ ಕಾಲ ಪ್ರಯಾಣಿಸಿ ಧರ್ಮಸ್ಥಳವನ್ನು ತಲುಪಿದ್ದಾರೆ.
ಆದರೆ ಈ ವೇಳೆ ಒಂದು ದಿನವೂ ಕೂಡ ಕಚೇರಿಗೆ ಶ್ರೇಯಾಂಸ್ ರಜೆ ಹಾಕಿಲ್ಲ, ಮುಂಜಾನೆಹೊತ್ತಲ್ಲಿ ನಡೆದು ನಂತರ ವರ್ಕ್ ಫ್ರಂ ಹೋಮ್ ನಡಿ ಕೆಲಸ ನಿರ್ವಹಿಸುತ್ತಾ ಸಾಗಿದ್ರು. 360 ಕಿಲೋಮೀಟರ್ ನಡಿಗೆಗೆ ಖರ್ಚಾಗಿದ್ದು ಜಸ್ಟ್ 1000 ಚಿಲ್ಲರೆ ಕಾಸು ದಾರಿಯುದ್ದಕ್ಕೂ ಜನರ ಪ್ರೀತಿಯೇ ಹೊಟ್ಟೆ ತುಂಬಿಸಿದೆ ಎಂದ ಶ್ರೇಯಾಂಸ್ ಬರೋಬ್ಬರಿ 360 ಕಿಲೋಮೀಟರ್ ನಡೆದರೂ ಶ್ರೇಯಾಂಸ್ ಗೆ ಖರ್ಚಾಗಿದ್ದು ಕೇವಲ 1000 ರೂಪಾಯಿ ಕಾಸು ಅಂದ್ರೆ ನಂಬ್ಲೇಬೇಕು.ಯಾಕಂದ್ರೆ ಬಸವನ ಜೊತೆ ಸಾಗ್ತಿರುವ ಶ್ರೇಯಾಂಸ್ ಗೆ ಜನರು ಪ್ರೀತಿಯಿಂದ ಹಲವೆಡೆ ಊಟ ತಿಂಡಿ ನೀಡಿದ್ದಾರೆ. ದಾರಿಯುದ್ದಕ್ಕೂ ಜನರು ಪ್ರೀತಿಯಿಂದ ಅಕ್ಕಿ ಬೆಲ್ಲ ಫಲಹಾರವನ್ನು ಭೀಷ್ಮನಿಗೆ ನೀಡುತ್ತಿದ್ದರು. ಹಲವೆಡೆ ಶ್ರೇಯಾಂಸ್ ಗೆ ಊಟದ ಬಿಲ್ ಕೂಡ ತೆಗೆದುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಉಜಿರೆ ಎಸ್ ಡಿ ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ,ಸಿದ್ಧವನದ ಶ್ರಮಜೀವಿ ಚಿಕ್ಕಂದಿನಿಂದ ಇದ್ದ ಗೋ ಪ್ರೇಮವನ್ನು ಇಮ್ಮಡಿಗೊಳಿಸಿದ್ದು ಸಿದ್ಧವನ ಶ್ರೇಯಾಂಸ್ ಜೈನ್ ಗೆ ಚಿಕ್ಕಂದಿನಿಂದಲೂ ಕೂಡ ದನಗಳಂದ್ರೆ ಅಕ್ಕರೆ, ಇದಕ್ಕೆ ಸಾಥ್ ನೀಡಿದ್ದು ಸಿದ್ಧವನ ಗುರುಕುಲ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಸಿದ್ಧವನದಲ್ಲಿಯೂ ಹೈನುಗಾರಿಕೆಯಲ್ಲಿ ಶ್ರೇಯಾಂಸ್ ಹೆಚ್ಚು ತೊಡಗಿಸಿಕೊಂಡಿದ್ದರು. ಇದುವೇ ರಾಜಧಾನಿಯಲ್ಲೂ ಕೂಡ ಹೈನುಗಾರಿಕೆಗೆ ಮುಂದಾಗಲು ಸಾಥ್ ನೀಡಿತ್ತು.
ಪ್ರತಿ ಊರಿನಲ್ಲೂ ಎತ್ತಿನ ಆರೋಗ್ಯ ತಪಾಸಣೆ ಭೀಷ್ಮನ ನಡಿಗೆ,ವರ್ತನೆ,ಜನರೊಂದಿಗೆ ಬೆರೆತ ರೀತಿ ಪವಾಡ ಪ್ರತಿ ಊರಿನಲ್ಲೂ ಕೂಡ ಎತ್ತಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೇ ಕೆಲವೆಡೆ ದೃಷ್ಟಿ ತೆಗೆಯುವ ಕೆಲಸವನ್ನು ಊರಿನವರು ಮಾಡುತ್ತಿದ್ದರು.ಇದರ ಜೊತೆ ಭೀಷ್ಮನ ನಡಿಗೆ, ಆತನ ವರ್ತನೆ ಮತ್ತು ಜನರ ಮನೆಯೊಳಗೆ ಹೋಗಿ ಗಂಜಲ,ಸೆಗಣಿ ಹಾಕುತ್ತಾ ಪ್ರೀತಿ ತೋರಿಸುತ್ತಿದ್ದ ರೀತಿ ಎಲ್ಲವೂ ಕೂಡ ಪವಾಡದಂತೆ ಕಂಡುಬಂತು ಎಂದು ಶ್ರೇಯಾಂಸ್ ಸುದ್ದಿಯೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಭೀಷ್ಮನಿಗೆ ಫಲ ಅರ್ಪಣೆ ಯುವಕನ ಸಾಹಸಕ್ಕೆ ಮೆಚ್ಚುಗೆ, ಆಶೀರ್ವದಿಸಿದ ಖಾವಂದರು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಭೀಷ್ಮನಿಗೆ ಫಲ ಅರ್ಪಿಸಿ, ಶ್ರೇಯಾಂಸ್ ರವರ ಭಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದ್ರು. 36 ದಿನಗಳ ನಿರಂತರ ನಡಿಗೆಯ ನಂತರ ಧರ್ಮಸ್ಥಳವನ್ನು ತಲುಪಿರುವುದಕ್ಕೆ ಶ್ರೇಯಾಂಸ್ ಕೂಡ ಸಂತಸದಿಂದಿದ್ದರು. ಮಂಜುನಾಥ ಸ್ವಾಮಿಯ ಕೃಪೆಯಿಂದ ಯಾವುದೇ ತೊಂದರೆಗಳಿಲ್ಲದೇ ಗುರಿ ತಲುಪಿರುವುದಾಗಿ ತಿಳಿಸಿದ್ದಾರೆ. ತನ್ನ ಗುರಿ ಈಡೇರಿಕೆ ಹಿಂದಿದೆ ಕುಟುಂಬದವರ ಸಾಥ್ ಅಪ್ಪ ಅಮ್ಮನಿಗೆ ತಡವಾಗಿ ವಿಷಯ ತಿಳಿಸಿದ್ದ ಯುವಕ ಶ್ರೇಯಾಂಸ್ ಈ ನಿರ್ಧಾರಕ್ಕೆ ಆರಂಭದಲ್ಲಿ ಪತ್ನಿ ಕೊಂಚ ವಿರೋಧ ವ್ಯಕ್ತಪಡಿಸಿದ್ರೂ ಕೂಡ ನಂತರ ಇವರ ಯೋಜನೆ ಯೋಚನೆಗೆ ಸಾಥ್ ನೀಡಿದ್ರು. ಆದರೆ ತನ್ನ ತಂದೆ ತಾಯಿ ಈ ಸಾಹಸದ ಬಗ್ಗೆ ಭಯ ಪಡುತ್ತಾರೆ ಅನ್ನುವ ಕಾರಣಕ್ಕೆ ಅವರಿಗೆ ವಿಷಯ ತಡವಾಗಿ ತಿಳಿಸಲಾಗಿತ್ತು ಎಂದು ಶ್ರೇಯಾಂಸ್ ಹೇಳಿದ್ರು.
ಭೀಷ್ಮನೊಂದಿಗಿನ ಒಡನಾಟ ನೆನೆದು ಕಣ್ಣೀರಾದ ಯುವಕ
ಭೀಷ್ಮ ಹುಟ್ಟಿದಾಗಿನಿಂದ ಶ್ರೇಯಾಂಸ್ ಜೊತೆ ಅವಿನಾಭ ಸಂಬಂಧ ಹೊಂದಿದ್ದಾನೆ. ಶ್ರೇಯಾಂಸ್ ಆತನಿಗೆ ಕೊಂಬಿನಲ್ಲಿ ಗುಮ್ಮುವುದು ಹೇಗೆ ಎಂದು ಕಲಿಸಿಕೊಟ್ಟಿದ್ದರು. ನಂತರ ಭೀಷ್ಮ ಶ್ರೇಯಾಂಸ್ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದ. ಇದೀಗ 36 ದಿನಗಳ ನಿರಂತರ ಪ್ರಯಾಣದ ನಂತರ ಭೀಷ್ಮ ನನ್ನು ಧರ್ಮಸ್ಥಳದ ಗೋಶಾಲೆಯಲ್ಲಿ ಬಿಟ್ಟು ಹೋಗುತ್ತಿರುವ ಬಗ್ಗೆ ಶ್ರೇಯಾಂಸ್ ಕಣ್ಣೀರಾದ್ರು. ಧರ್ಮಸ್ಥಳದಲ್ಲಿ ಭೀಷ್ಮ ತುಂಬಾ ಚೆನ್ನಾಗಿರುತ್ತಾನೆ, ಆ ಬಗ್ಗೆ ನನಗೆ ಯಾವುದೇ ಭಯವಿಲ್ಲ. ನಾನು ಸಾಕಿರುವುದಕ್ಕಿಂತ ಮೂರು ಪಟ್ಟು ಉತ್ತಮವಾಗಿ ಅವನನ್ನು ಸಾಕುತ್ತಾರೆ. ಆದರೆ ನನಗೆ ಆತನ ಒಡನಾಟ ಮಿಸ್ ಆಗುತ್ತದೆ ಅನ್ನುವ ಬೇಸರವಷ್ಟೇ,ಅದನ್ನು ನಾನು ಕೆಲಸದಲ್ಲಿ ಬ್ಯುಸಿಯಾಗುವ ಮೂಲಕ ಸರಿಪಡಿಸಿಕೊಳ್ಳುತ್ತೇನೆಂದು ಶ್ರೇಯಾಂಸ್ ತಿಳಿಸಿದ್ರು.