ಬಂಟ್ವಾಳ: ಆತ್ಮಕಲ್ಯಾಣ ಮತ್ತು ಮುಂದಿನ ಪೀಳಿಗೆಯನ್ನು ಧರ್ಮದ ಕಡೆ ಆಕರ್ಷಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವ ಕೆಲಸಗಳು ಜಿನಮಂದಿರಗಳಿಂದಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಗೌರವ ಸದಸ್ಯರು, ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ಬಂಟ್ವಾಳ ತಾ. ಅಜ್ಜಿಬೆಟ್ಟು ಗ್ರಾಮದ ಅತಿಶಯ ಕ್ಷೇತ್ರ ಅಜ್ಜಿಬೆಟ್ಟು ಭಗವಾನ್ ೧೦೦೮ ಶ್ರೀ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಗುರುವಾರ ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗ ಹಾಗೂ ಚಾತುರ್ಮಾಸ ನಿಮಿತ್ತ ಕಲಶ ಸ್ಥಾಪನಾ ಮಹೋತ್ಸವಕ್ಕೆ ಚಾಲನೆ ಹಾಗೂ ನೂತನವಾಗಿ ನಿರ್ಮಾಣಗೊಂಡ “ಶ್ರೀ ಪದ್ಮಾವತಿ ಸಭಾಭವನ”ವನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು.
ಸ್ವಾರ್ಥಕ್ಕಾಗಿ ಮಾಡುವ ಕಾರ್ಯಕ್ರಮ, ವ್ಯವಹಾರಗಳು ತಾತ್ಕಾಲಿಕ ಸಂತೋಷ ನೀಡಿದರೆ,ಭಗವಂತನ ಗುಣ ನೆನಸಿದರೆ ಶಾಶ್ವತವಾದ ಸುಖ ಸಿಗಲಿದೆ ಎಂದ ಡಾ.ಹೆಗ್ಗಡೆ ಮುನಿಶ್ರೀಗಳ ಚಾರ್ತುಮಾಸ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ತಮ್ಮಲ್ಲಿರುವ ಸಂದೇಹ ಪರಿಹರಿಸಿಕೊಳ್ಳಬಹುದು ಎಂದರು.
ತಾನು ರಾಜಕೀಯವಾಗಿ ಗುರುತಿಸುವುದಿಲ್ಲ,ತಮ್ಮ ಸಮಾಜಸೇವೆಯನ್ನು ಪರಿಗಣಿಸಿ ರಾಜ್ಯ ಸಭೆಗೆ ಗೌರವ ಸದಸ್ಯನಾಗಿ ಆಯ್ಕೆ ಮಾಡಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಅವರು ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ದೇಶವ್ಯಾಪಿ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.
ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರು ಆಶೀರ್ವಚನಗೈದು,ಆಧುನಿಕ ಜಗತ್ತಿನಲ್ಲಿ ಧರ್ಮದ ಅನುಷ್ಟಾನದ ಆವಶ್ಯಕತೆಯಿದ್ದು, ಚಾತುರ್ಮಾಸದಲ್ಲಿ ಚತುರ್ವಿಧ ಆರಾಧನೆಗಳ ಮೂಲಕ ಉತ್ತಮ ಗುಣಗ್ರಾಹಿಗಳಾಗಿ ಜೀವನದಲ್ಲಿ ಪರಿವರ್ತನೆ ಹೊಂದಬಹುದು ಎಂದು ಹೇಳಿದರು.
ಶ್ರೀ ಜೈನಮಠ ದಾನಶಾಲಾ ಕಾರ್ಕಳ ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನಗೈದು,ದಿಗಂಬರ ಮುನಿಗಳು ಮಾತನಾಡುವ,ಓಡಾಡುವ ದೇವರಿದ್ದಂತೆ,
ಅಹಿಂಸಾ ಧರ್ಮ, ಪರಂಪರೆ, ಸಂಪ್ರದಾಯವನ್ನು ಯಾವತ್ತು ಮರೆಯಬಾರದು,ಸರ್ವ ಧರ್ಮ ಸಮನ್ವತೆಯ ಭಾರತ ದೇಶವನ್ನು ಮಾತೃಸ್ಥಾನದಲ್ಲಿ ಕಾಣಬೇಕು ಎಂದರು.
ಮೂಡಬಿದ್ರೆ ಜೈನಮಠಾಧೀಶರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನಗೈದು, ಚಾರ್ತುಮಾಸದ ಸಮಯದಲ್ಲಿ ಮುನಿಶ್ರೀಗಳ ಪ್ರವಚನವನ್ನು ಆಲಿಸಿ ತಮ್ಮ ಜೀವನವನ್ನು ಪಾವನವನ್ನಾಗಿಸಬೇಕು, ಸಭ್ಯತೆ, ಸದಾಚಾರ,ಶಿಸ್ತುನ್ನು ಪಾಲಿಸಿದಾಗ ಸಮಾಜದಲ್ಲಿ ಯೋಗ್ಯ ವ್ಯಕ್ತಿಯಾಗಿ ಬಾಳಲು ಸಾಧ್ಯ, ಸುಜ್ಞಾನ ಬೆಳೆಯುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಲ್ಲು ಮುನಿಶ್ರೀಗಳ ಚಾರ್ತುಮಾಸ ನಡೆಯುವಂತಾಗಬೇಕು ಎಂದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಉದಯಕುಮಾರ್ ಕಟ್ಟೆಮಾರ್,ಅರುಣ್ ಕುಮಾರ್ ಇಂದ್ರ,ವೃಷಭರಾಜ್ ಜೈನ್ ಉಪಸ್ಥಿತರಿದ್ದರು.
ಭರತ್ ರಾಜ್ ಜೈನ್ ಪ್ರಾಸ್ತಾವನೆಗೈದರು. ಆಡಳಿತ, ಚಾರ್ತುಮಾಸ ಸಮಿತಿ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸ್ವಾಗತಿಸಿದರು. ಯುವರಾಜ ಆಳ್ವ ವಂದಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಇದೇ ವೇಳೆ ರಾಜ್ಯಸಭೆಯ ಗೌರವಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಡಾ.ಹೆಗ್ಗಡೆಯವರನ್ನು ಬಸದಿ ಹಾಗೂ ಯೋಜನೆಯ ಒಕ್ಕೂಟದಿಂದ ಸನ್ಮಾನಿಸಲಾಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಅಗಮಿಸಿ ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಆಶಿರ್ವಾದ ಪಡೆದರು.