ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಘಟನೆ ಕುರಿತು ಹೀಗೆ ಹೇಳಿದ್ದಾರೆ. ಉಡುಪಿ ಕೇಸ್ ನಲ್ಲಿ ಪೊಲೀಸರು ಸುಮೋಟೋ ಎಫ್ ಐಆರ್ ದಾಖಲು ಮಾಡಿದ್ದಾರೆ. ಡಿವೈಎಸ್ಪಿ ಮಟ್ಟದಲ್ಲಿ ತನಿಖೆ ಆಗುತ್ತಿದೆ. ಮೊದಲು ಆ ತನಿಖೆ ನಡೆಯಲಿದೆ. ರಾಷ್ಟ್ರೀಯ ಮಹಿಳಾ ಆಯೋಗವೇ ಸದಸ್ಯರೇ ಕಾಲೇಜಿನಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ.
ತನಿಖಾ ವರದಿ ದೊರೆತ ಮೇಲೆ ಈ ಕುರಿತು ಮಾತನಾಡುತ್ತೇನೆ. ಕಾಲೇಜಿನ ವಿದ್ಯಾರ್ಥಿಗಳು ತಮಾಷೆಗೆ ಮಾಡಿರಬಹುದು ಅಂತ ಹೋಂ ಮಿನಿಸ್ಟರ್ ಹೇಳಿರಬಹುದು. ಡಿವೈಎಸ್ಪಿ ಮಟ್ಟದಲ್ಲಿ ತನಿಖೆ ನಡೆಯುತ್ತಿರುವ ವೇಳೆ ಎಸ್ ಐಟಿ ತನಿಖೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಈಗ ಜುಲೈ ತಿಂಗಳ ಮಳೆ ಹಾನಿಯಾಗಿರುವ ಬಗ್ಗೆ ಪರಿಶೀಲನೆಗೆ ಬಂದಿದ್ದೇನೆ ಎಂದರು.
ನೈತಿಕ ಪೊಲೀಸ್ ಗಿರಿ ಮಾಡಿದ್ರೆ ಸುಮ್ನಿರಲ್ಲ: ಯಾರೇ ನೈತಿಕ ಪೊಲೀಸ್ ಗಿರಿ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರಿಗೆ ಇಂತಹ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದ್ದೇನೆ. ಸೌಜನ್ಯ ಕೇಸ್ ಸಿಬಿಐಗೆ ವಹಿಸಲಾಗಿತ್ತು. ಅವರ ಪೋಷಕರು ಮರು ತನಿಖೆಗೆ ಮನವಿ ಮಾಡಿದ್ದಾರೆ.
ಕಾನೂನು ಪ್ರಕಾರ ಏನಾಗಬೇಕು ಎಂದು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನಾನು ಲಾಯರ್ ಆಗಿದ್ದವನು. ಈ ಪ್ರಕರಣದ ಕುರಿತು ಹೇಳುವುದಾದರೆ ಮತ್ತೊಮ್ಮೆ ಹೈಕೋರ್ಟ್ ಗೆ ಈ ಕುರಿತು ಮನವಿ ಮಾಡಬೇಕು. ಸೌಜನ್ಯ ಸಿಬಿಐ ಪ್ರಕರಣದ ಕುರಿತು ನ್ಯಾಯಾಲಯದ ಆದೇಶ ನೋಡಿಲ್ಲ. ಅದರ ಜಡ್ಜ್ ಮೆಂಟ್ ಓದಿ ನೋಡುತ್ತೇನೆ. ಅಪೀಲ್ ಗೆ ಅವಕಾಶ ಇದೆಯೇ ಎಂದು ಪರಿಶೀಲಿಸುತ್ತೇನೆ. ಅವರ ಪೋಷಕರು ಈ ನಿಟ್ಟಿನಲ್ಲಿ ಜಡ್ಜ್ ಮೆಂಟ್ ಕಾಪಿ ತಂದು ಕೊಟ್ಟಿದ್ದಾರೆ ಅದನ್ನು ಪರಿಶೀಲಿಸಬೇಕಿದೆ ಎಂದರು. ಬಿಟ್ ಕಾಯಿನ್ ವಿಚಾರದಲ್ಲಿ ಎಸ್ ಐಟಿ ತನಿಖೆ ಆಗುತ್ತಿದೆ. ಪೊಲೀಸರಿಗೆ ತನಿಖೆಯಲ್ಲಿ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಕಿದ್ರೆ ಕ್ರಮ: ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮಾಡಿದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಟೀಕೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ ಸುಳ್ಳು ಸುದ್ದಿ ಹರಡಿದಲ್ಲಿ ಕ್ರಮ ಕೈಗೊಳ್ಳುತ್ತೇವೆ. ವೈಯಕ್ತಿಕ ತೇಜೋವಧೆ, ಕುಟುಂಬದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಯಾರದೇ ಫ್ಯಾಮಿಲಿ ಬಗ್ಗೆ ಯಾರಾದ್ರೂ ಏನು ಬೇಕಾದರೂ ಹೇಳಬಹುದು ಎಂಬ ಧೋರಣೆಯವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸೋದು ಬೇರೆ. ವೈಯಕ್ತಿಕವಾಗಿ ತೇಜೋವಧೆ ಮಾಡೋದು ಕೂಡ ಬೇರೆ.