ಮೂಡುಬಿದಿರೆ: ಡಬಲ್ ಇಂಜಿನ್ ಸರ್ಕಾರದ ದಿನಬಳಕೆ ವಸ್ತುಗಳ ಬೆಲೆ ಏರಿಕೆ ನೀತಿ ಹಾಗೂ ಶಾಸಕರ ಶೇ.40 ಭ್ರಷ್ಟಾಚಾರ ಮಾಡುತ್ತಿದ್ದಾರೆ ಆರೋಪಿಸಿ, ವಿರುದ್ಧ ಮೂಡುಬಿದಿರೆ ಮಹಿಳಾ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟ ರಾಜಕಾರಣಿಗಳಲ್ಲಿ ಮೇಲ್ಪತ್ತಿಯ ಭ್ರಷ್ಟ ರಾಜಕಾರಣಿ ಉಮಾನಾಥ ಕೋಟ್ಯಾನ್. ಜಾತಿ-ಜಾತಿಗಳ ಮೇಲೆ ಸಂಘರ್ಷಣೆಯನ್ನು ಸಾರಿ ಮುಸಲ್ಮಾನರು, ಕ್ರಿಶ್ಚಿಯನ್ನರ ಬಳಿ ಹೋಗಿ ತಾನು ಬೇರೆ ಬಿಜೆಪಿಯವರ ತರ ಅಲ್ಲ. ಹಾಗಾದರೆ ಬಿಜೆಪಿ ಬೇರೆ ಬೇರೆ ಉಂಟಾ? ಬಿಜೆಪಿ ಇವನಪ್ಪನದ್ದಾ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
ಶಾಸಕನಾದ 3 ತಿಂಗಳಲ್ಲಿ ಮೂಲ್ಕಿಯಲ್ಲಿ ಸರ್ಕಾರಿ ನಿವೇಶನದಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ 25 ಸೆಂಟ್ಸ್ ಜಾಗವನ್ನು ದಬ್ಬಾಳಿಕೆ ನಡೆಸಿದ್ದಾರೆ. ನಾನು ಪಾಪದವ, ನಾನು ಬಡವ ಎಂದು ಹೇಳಿಕೊಳ್ಳುವ ಮೂಡುಬಿದಿರೆಯ ಶಾಸಕ, ಕರ್ನಾಟಕ ಕಂಡ ಒಬ್ಬ ಭ್ರಷ್ಟ ರಾಜಕಾರಣಿ. ಬಡವ ಎಂದು ಹೇಳಿಕೊಳ್ಳುವ ಶಾಸಕ ಇಂದು 500 ಕೋಟಿಯ ಧನಿಕ. ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತನ್ನ ಅಳಿಯ, ಶಾಸಕರ ಕುಟುಂಬಸ್ಥರೇ ಗುತ್ತಿಗೆದಾರರು. ಮೂಡುಬಿದಿರೆಯ ಜನತೆ ಎಚ್ಚೆತ್ತುಕೊಂಡು ಭ್ರಷ್ಟ ರಾಜಕಾರಣಿಯನ್ನು ಈ ಬಾರಿಯ ಚುನಾವಣೆಯಿಂದ ಕೆಳಗಿಳಿಸುವ ಕಾರ್ಯ ಮಾಡಬೇಕು ಎಂದರು.
ಮಹಿಳಾ ಕಾಂಗ್ರೆಸ್ ಮೂಡುಬಿದಿರೆ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರವು ದಿನನಿತ್ಯ ಬಳಕೆ ಮಾಡುವ ವಸ್ತುಗಳಿಗೆ ಜಿ.ಎಸ್.ಟಿ ಯನ್ನು ಹಾಕಿ ಬಡವರಿಗೆ ಅನ್ಯಾಯ ಮಾಡುತ್ತಿದೆ. ಬೆಲೆ ಏರಿಕೆಯಿಂದಾಗಿ ಮಹಿಳೆಯರ ಜೀವನ ಏರುಪೇರಾಗಿದೆ. ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತ ಇಲ್ಲದಂತ್ತಾಗಿದೆ.ಬೆಲೆ ಏರಿಕೆಯ ವಿರುದ್ಧ ಪ್ರತಿಯೊಬ್ಬ ಮಹಿಳೆಯು ಧ್ವನಿಯೆತ್ತಬೇಕಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ರೂಪಾ ಸಂತೋಷ್ ಶೆಟ್ಟಿ, ಮಮತಾ ಆನಂದ್, ಶಕುಂತಳಾ, ಸುರೇಶ್ ಕೋಟ್ಯಾನ್, ಕೊರಗಪ್ಪ, ಪಿ.ಕೆ.ಥೋಮಸ್, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ಪುರುಷೋತ್ತಮ ನಾಯಕ್, ವಾಲ್ಪಾಡಿ ಗ್ರಾಪಂ ಸದಸ್ಯ ಅರುಣ್ ಕುಮಾರ್ ಶೆಟ್ಟಿ,ತಾ.ಪಂ ಮಾಜಿ ಅಧ್ಯಕ್ಷರುಗಳಾದ ರಜನಿ, ಸವಿತಾ ಟಿ.ಎನ್., ಯೂತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ ಮತ್ತಿತರರಿದ್ದರು. ಕಾಂಗ್ರೆಸ್ ಕಚೇರಿಯಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಉಪತಹಶೀಲ್ದಾರ್ ರಾಮು ಅವರ ಮೂಲಕ ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಲಾಯಿತು.