ಮೂಡುಬಿದಿರೆ: ಕಳೆದ ಹಲವಾರು ವರ್ಷಗಳ ಹಿಂದೆ ಮನೆ ನಿರ್ಮಿಸಿ ಕುಳಿತುಕೊಂಡು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಹೊಸಬೆಟ್ಟು ಮತ್ತು ತೋಡಾರು ಗ್ರಾಮಗಳ 8 ಕೊರಗ ಕುಟುಂಬಗಳಿಗೆ ಸಹಿತ 360 ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು 69 ಜನರಿಗೆ ಪಿಂಚಣಿ ಆದೇಶಪತ್ರವನ್ನು ಕ್ಷೇತ್ರದ ಶಾಸಕ ಕೋಟ್ಯಾನ್ ಬುಧವಾರ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ವಿತರಿಸಿದರು.
ಪುತ್ತಿಗೆ ಜಿ.ಪಂ.ಕ್ಷೇತ್ರದ 6 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಿಗೆ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೋಟ್ಯಾನ್. ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಬಳಿಗೆ ಬಂದು ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವಂತಹ ಕಾರ್ಯಕ್ರಮ ಜನಸ್ಪಂದನ. ಕೆಲವು ಪಂಚಾಯಿತಿಗಳಲ್ಲಿ ಈಗ ನೀವು ಹಕ್ಕುಪತ್ರ ತೆಗೆದುಕೊಳ್ಳಬೇಡಿ 3 ತಿಂಗಳ ನಂತರ ನಾವೇ ಮಾಡಿಕೊಡುತ್ತೇವೆಂದು ಅಮಾಯಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ರಾಜಕೀಯ ಬೇಳೆ ಬೇಯಿಸಲು ಜನರಿಗೆ ಮೋಸ ಮಾಡಬೇಡಿ ಎಂದು ಎಚ್ಚರಿಸಿದರು.
ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಇರುವೈಲು ಗ್ರಾಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಪಾಲಡ್ಕ ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಹೊಸಬೆಟ್ಟು ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ತೆಂಕಮಿಜಾರು ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷ ಕೇಶವ ಪೂಜಾರಿ, ಮೂಡಾದ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು, ತಾಪಂ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಕಂದಾಯ ನಿರೀಕ್ಷಕ ಮಂಜುನಾಥ್, ಉಪತಹಸೀಲ್ದಾರ್ ರಾಮ್ ಉಪಸ್ಥಿತರಿದ್ದರು.