ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎ.ಬಿ.ಶೆಟ್ಟಿ ವೃತ್ತವನ್ನು ಈ ಹಿಂದೆ ವಿಜಯ ಬ್ಯಾಂಕ್ ವತಿಯಿಂದ ಹಾಲಿ ಇರುವ ಜಂಕ್ಷನ್ನಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಲಾಗಿದ್ದು, ತದನಂತರ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸದ್ರಿ ಯು.ಪಿ.ಮಲ್ಯ ರಸ್ತೆಯಿಂದ ಹ್ಯಾಮಿಲ್ಟನ್ ರಸ್ತೆಯನ್ನು ಏಕಮುಖ ಸಂಚಾರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.
ಅದರಂತೆ ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತ ಮರು ನಿರ್ಮಾಣ ಮಾಡಲು ತಾಂತ್ರಿಕ ಸಮಾಲೋಚಕರ ವಿನ್ಯಾಸದಂತೆ ಪ್ರಸ್ತಾಪಿಸಲಾಗಿದೆ. ಅದರಂತೆ ಸದ್ರಿ ಎ.ಬಿ.ಶೆಟ್ಟಿ ವೃತ್ತವನ್ನು ಪ್ರಸ್ತುತ ಅಭಿವೃದ್ಧಿಪಡಿಸಲು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನವರು ಮುಂದೆ ಬಂದಿದ್ದು, ವಿಶೇಷ ವಿನ್ಯಾಸದಂತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು, ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತದ ಹೆಸರಿನಲ್ಲಿಯೇ ಸದ್ರಿ ಬ್ಯಾಂಕ್ ನವರು ಅಭಿವೃದ್ಧಿಪಡಿಸಲು ಒಪ್ಪಿರುತ್ತಾರೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.
ಮುಂದುವರೆದು ಬಲ್ಮಠದಲ್ಲಿರುವ ಅಂಬೇಡ್ಕರ್ ಜಂಕ್ಷನ್ ಭಾಗವನ್ನು ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದ್ದು, ಸದ್ರಿ ಡಾ|| ಬಿ.ಆರ್.ಅಂಬೇಡ್ಕರ್ ಜಂಕ್ಷನ್ ಭಾಗದಲ್ಲಿನ ಒಳ ವಿನ್ಯಾಸ ಹಾಗೂ ಡಾ||ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಮ.ನ.ಪಾ ವತಿಯಿಂದ ಅಭಿವೃದ್ಧಿಯ ಪ್ರಸ್ತಾವನೆಯು ಅನುಮೋದನೆಗೊಂಡಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಮಹಾಪೌರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.