ಬೆಳ್ತಂಗಡಿ: ಭೂ ಅಳತೆಗೆ ಸಂಬಂಧಿಸಿದಂತೆ ಅನೇಕ ತಾಂತ್ರಿಕ ತೊಂದರೆಗಳಿದ್ದು ಅವುಗಳ ವಿಚಾರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಸಹಾಯಕ ಆಯುಕ್ತರು ಸೇರಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರಿಗೆ ತಿಳಿಸಲಾಗಿದೆ. ಸರಕಾರಿ ಜಮೀನು ಯಾರೇ ಒತ್ತುವರಿ ಮಾಡಿದರೂ ತಕ್ಷಣ ಸ್ಥಳ ತನಿಖೆ ನಡೆಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ತಿಳಿಸಿದರು.
ಬೆಳ್ತಂಗಡಿ ತಾಲೂಕು ಕಚೇರಿ ಸಭಾಂಗಣದಲ್ಲಿ ಜೂ.೨೮ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದರು.
ನಾಲ್ಕೂರು ಗ್ರಾಮದ ಸರ್ವೇ ನಂಬರ್ ೯೨/೧ರಲ್ಲಿ ಪೋಡಿ ದುರಸ್ತಿಗಾಗಿ ಜೆಸಿಂತಾ ಪಾಯಸ್ ಅರ್ಜಿ ಸಲ್ಲಿಸಿದ್ದರು. ಅದೇ ಸರ್ವೇ ನಂಬರ್ನಲ್ಲಿ ಒಟ್ಟು ಮಂಜೂದಾರರು ೩೫ ಮಂದಿಯಿದ್ದು ಅವರೆಲ್ಲರಿಗೂ ದುರಸ್ತಿ ಸಾಧ್ಯವಿರಲಿಲ್ಲ, ಆದರೆ ಜೆಸಿಂತಾ ಪಾಯಸ್ ಆರೋಗ್ಯ ಸಮಸ್ಯೆ ಮನಗಂಡು ಏಕವ್ಯಕ್ತಿ ಕೋರಿಕೆಗೆ ಅಪರ ಜಿಲ್ಲಾಧಿಕಾರಿ ಸ್ಪಂದಿಸಿ ಅನುಮೋದನೆ ನೀಡಲು ಸೂಚಿಸಿದ್ದಲ್ಲದೆ ೧೫ ದಿನಗಳ ಒಳಗಾಗಿ ಸಂಪೂರ್ಣ ಅಳತೆ ಮಾಡಿ ವರದಿ ನೀಡಲು ಆದೇಶಿಸಿದ್ದಾರೆ.
ನಡ ಗ್ರಾಮದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿದ ವಿಚಾರವಾಗಿ ಸ್ಥಳೀಯ ನಿವಾಸಿ ಅಬ್ದುಲ್ ಶಾರಿಕ್, ಇಂದಬೆಟ್ಟು ಗ್ರಾಮದ ಫ್ಲೋರಿನ್ ಲೋಬೋ ಅವರು ೧೧ಇ ಪೋಡಿ ದುರಸ್ತಿಗೆ ಸಲ್ಲಿಸಿರುವ ಅರ್ಜಿ ಸರ್ವೇಯರ್ ಬಳಿಯೇ ಉಳಿದಿರುವ ವಿಚಾರವಾಗಿ, ಧರ್ಮಸ್ಥಳ ಗ್ರಾಮದ ಚೋಮು ಅವರ ಮನೆ ಸಮೀಪದ ಮರ ಕಡಿಯುವವ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆಗೆ ಒಂದು ವಾರದೊಳಗೆ ಕ್ರಮಕ್ಕೆ ಸೂಚಿಸಲಾಯಿತು.
ಸರಕಾರಿ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಚರಂಡಿ ನಿರ್ಮಿಸಿ ಅದರ ನೀರು ಮತ್ತೊಬ್ಬರ ಮನೆಗೆ ಬಿಟ್ಟಿರುವ ವಿಚಾರವಾಗಿ ಇಳಂತಿಲ ಗ್ರಾಮದ ನೇಜಿಕಾರು ಲಕ್ಷ್ಮಣ ಪೈ ದೂರು ನೀಡಿದರು. ಇಂದಬೆಟ್ಟು ಗ್ರಾಮದಲ್ಲಿ ಪಹಣಿ ನಮೂದಿಸುವ ವೇಳೆ ತಾಂತ್ರಿಕ ದೋಷ ಬಂದ ಹಿನ್ನೆಲೆ ಸರಿಪಡಿಸುವ ವಿಚಾರವಾಗಿ ಅಪಾರ ಜಿಲ್ಲಾಧಿಕಾರಿಗೆ ದೂರುಗಳು ಬಂದಿದ್ದವು. ತಕ್ಷಣ ಕ್ರಮಕ್ಕೆ ಸೂಚಿಸಿದರು.
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ ಸಂಜಯನಗರ ಶ್ರೀ ಧ.ಮಂ. ಆಂಗ್ಲಮಾಧ್ಯಮ ಶಾಲೆಗೆ ಸಾಗುವ ಸಾರ್ವಜನಿಕ ರಸ್ತೆ ಕಳಪೆಯಾಗಿದ್ದು ಸರಿಪಡಿಸುವಂತೆ ದೂರು ಬಂದಿತ್ತು. ಈ ಕೂಡಲೆ ಕ್ರಮಕ್ಕೆ ಪ.ಪಂ. ಮುಖ್ಯಾಧಿಕಾರಿಗೆ ಆದೇಶಿಸಿದರು.
ಈ ವೇಳೆ ಸಹಾಯಕ ಆಯುಕ್ತರು ಗಿರೀಶ್ ನಂದನ್, ತಹಶೀಲ್ದಾರ್ ಮಹೇಶ್ ಜೆ., ನೂತನ ತಹಶೀಲ್ದಾರ್ ಪೃಥ್ವಿ ಸ್ಥಾನಿಕಮ್, ಉಪ ತಹಶೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.