ಮಂಗಳೂರು: ಭಾರತದ ರಾಷ್ಟ್ರಧ್ವಜ ಕಾಯ್ದೆಗೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶಗಳಿಂದ ಪಾಲಿಸ್ಟರ್ ಬಟ್ಟೆಗಳನ್ನು ತಂದು ಗುಡ್ಡೆ ಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚರಕ ಕೇವಲ ಒಂದು ಸಿಂಬಲ್ ಅಲ್ಲ ದೊಡ್ಡ ರಾಜ ಆಡಳಿತವನ್ನು ಕಿತ್ತೆಸೆದ ಸಂಕೇತ. ಖಾದಿ ದೇಶದ ಸ್ವಾತಂತ್ರ ಹೋರಾಟಗಾರರ ತ್ಯಾಗದ ಸಂಕೇತವಾಗಿದೆ. ಈ ದೇಶದಲ್ಲಿ ಯಾವುದೇ ಸರಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ಧತಿ ಇತ್ತು. ಖಾದಿ ತೊಡುವ ಸಂದೇಶವನ್ನು ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಸಾರಬೇಕಿತ್ತು.
ಪಾಲಿಸ್ಟರ್ ಬಟ್ಟೆ ವಿದೇಶದಿಂದ ಆಮದಿಗೆ ಅವಕಾಶ ನೀಡಲಾಗಿದೆ, ಇದರಿಂದ ಚೀನಾ ಲಾಭ ಪಡೆಯುತ್ತಿದೆ. ಸರಕಾರದ ಇಂತಹ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನು ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಬೇಕು ಎಂದು ಖಾದರ್ ಆಗ್ರಹಿಸಿದರು.
ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗಾ ಯೋಜನೆಗೆ ತೀರ್ಮಾನ ಮಾಡಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕಿದೆ. ಈಗ ವಿತರಿಸಲಾಗುತ್ತಿರುವ ರಾಷ್ಟ್ರ ಧ್ವಜಗಳಲ್ಲೂ ಹಲವಾರು ಲೋಪಗಳು ಇದೆ ಎಂದು ಅವರು ಆರೋಪಿಸಿದರು.
ಹರ್ ಘರ್ ತಿರಂಗಾ ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ, ಇನ್ನೂ ಹಲವರಿಗೆ ಮನೆಯೇ ಇಲ್ಲ, ಅವರು ಬಾವುಟ ಹಾರಿಸುವುದು ಎಲ್ಲಿ ? ಅಂದರೆ ಮನೆಯಿಲ್ಲದವರು ಇದನ್ನು ಆಚರಣೆ ಮಾಡೋದು ಬೇಡವೇ ಎಂದು ಖಾದರ್ ಪ್ರಶ್ನಿಸಿದರು.