ಬೆಂಗಳೂರು: ಕಲ್ಯಾಣ ಕರ್ನಾಟಕದ ಬಿಜೆಪಿ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕರ್ನಾಟಕದ ನಕ್ಷೆಯಿಂದ ಅಳಿಸಿ ಹಾಕಿದಿಯೇ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಮಳೆ ಹಣಿಗೆಯಾಗಿರುವ ರಾಜ್ಯದ ಎಲ್ಲ ಭಾಗಗಳ ರೈತರಿಗೆ ಪರಿಹಾರ ಧನ ನೀಡುವ ರಾಜ್ಯ ಸರ್ಕಾರ ಕೇವಲ ಕಲ್ಯಾಣ ಕರ್ನಾಟಕದ ಜನರನ್ನು ಮರೆತಿರುವುದೇಕೆ? ಆ ಭಾಗಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ’ ಎಂದಿದ್ದಾರೆ.
‘ಇಷ್ಟೆಲ್ಲ ಅನಾನುಕೂಲ ಆಗಿದ್ದರೂ ಈ ಭಾಗದ ಜನರಿಗೆ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ. ಇದೆಲ್ಲವನ್ನು ಕಂಡೂ ಈ ಭಾಗದ ಬಿಜೆಪಿ ಶಾಸಕರು ಮೂಕ ಪ್ರೇಕ್ಷಕರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಸರ್ಕಾರ ಈಗ 21 ಜಿಲ್ಲೆಗಳಿಗೆ ರಾಜ್ಯ ವಿಪತ್ತು ನಿಧಿ ಅಡಿಯಲ್ಲಿ ಒಟ್ಟು 200 ಕೋಟಿ ಪರಿಹಾರ ಅನುದಾನ ಪ್ರಕಟಿಸಿದೆ.