ಮಂಗಳೂರು: ಪ್ರವಾದಿ ಮುಹಮ್ಮದ್ ರವರ ಕ್ರಾಂತಿಕಾರಿ ಬದುಕನ್ನು ಅಧ್ಯಯನ ಮಾಡಿದಾಗ ಪ್ರಸ್ತುತ ಕಾಲಘಟ್ಟದಲ್ಲಿ ಅವರು ಆಗಮನದ ಅಗತ್ಯ ಕಂಡು ಬರುತ್ತದೆ. ಅತ್ಯಂತ ಕ್ರೌರ್ಯ ಹೊಂದಿರುವ ಸಮಾಜದಲ್ಲಿ ಸಂದೇಶವಾಹಕರಾಗಿ ಶಿಸ್ತು,ಸಂಯಮದ, ನ್ಯಾಯ ಸತ್ಯಸಂಧತೆ ಯನ್ನು ಬೋಧಿಸಿದರು. ಏಕದೇವೋಪಾಸನೆಯನ್ನು ಜನರೆಲ್ಲರೂ ಅಳವಡಿಸಿದರೆ ಇಲ್ಲಿ ವೈರತ್ವ ವಿದ್ವೇಶ ಯಾವುದೂ ಉದ್ಭವಿಸದು. ಏಕದೇವೋಪಾಸನೆಯ ಪರಿಕಲ್ಪನೆ ಅತೀ ಮುಖ್ಯ. ಪ್ರವಾದಿ ಮುಹಮ್ಮದ್ ಸರ್ವರಿಗೂ ಮಾದರೀ ಬದುಕು ಸವೆಸಿದರು ಎಂದು ಹಿರಿಯ ಚಿಂತಕ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಅವರು ಜಮಾಅತೆ ಇಸ್ಲಾಮೀ ಸೀರತ್ ಅಭಿಯಾನದ ಪ್ರಯುಕ್ತ ಅ.7 ರಂದು ಮಂಗಳೂರು ಪುರಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲೆ ಆಯೋಜಿಸಿದ “ದೇಶದ ಹಿತಚಿಂತನೆ ಪ್ರವಾದಿ ಮುಹಮ್ಮದ್ (ಸ)ರ ಚಿಂತನೆಗಳ ಬೆಳಕಿನಲ್ಲಿ” ಎಂಬ ವಿಚಾರ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇನ್ನೋರ್ವ ಮುಖ್ಯ ಅತಿಥಿ ಕ್ಲಿಫರ್ಡ್ ಫೆರ್ನಾಂಡಿಸ್ ಮಾತನಾಡಿ. ನಾವು ಪರರ ಹಿತ ಬಯಸುವವರಾಗಬೇಕು. ಪ್ರವಾದಿಗಳು ಮಾನವೀಯ ಬದುಕು ಸವೆಸಿದರು. ಅವರು ದಾರಿ ದೀಪಗಳು. ದೇವನ ಸಂದೇಶ ಆಲಿಸಿ ಪಾಲಿಸಬೇಕು ಎಂದು ಹೇಳಿದರು.
ನಂತರ ಕೆಪಿಸಿಸಿ ರಾಜ್ಯ ವಕ್ತಾರರಾದ ಶ್ರೀ ನಿಕೇತ್ ರಾಜ್ ಮೌರ್ಯ ಮಾತನಾಡುತ್ತಾ, ಪ್ರವಾದಿ ಮುಹಮ್ಮದ್ ರ ಬಗ್ಗೆ ಅಪಪ್ರಚಾರ ವನ್ನು ಮಾಡುತ್ತಿದ್ದಾರೆ.ಅವರು ಬದುಕಿದ್ದಾಗಲೂ ಅಪಪ್ರಚಾರ ಮಾಡಿದ್ದ ರು.ಆದರೆ ಅವೆಲ್ಲವನ್ನೂ ಮಾನವೀಯ ಮೌಲ್ಯಗಳ ಗುಣ ಗಳ ಮೂಲಕ ಎದುರಿಸಿದರು. ಮನುಷ್ಯ ಕುಲವೊಂದೇ ಎಂಬುದನ್ನು ಪ್ರವಾದಿಗಳು ಸಾರಿದರು. ಭಾರತದಂತಹ ದೇಶ ಮುನ್ನಡೆಸಲು ಎಲ್ಲರೂ ಜೊತೆಗೂಡಿದರೆ ಮಾತ್ರ ಸಾಧ್ಯ. ಭಾರತೀಯರು ಇದನ್ನು ಅರ್ಥೈಸಬೇಕು ಪ್ರವಾದಿಗಳ ಸಂದೇಶಗಳು ಜನರ ಮನಮುಟ್ಟಬೇಕಾಗಿದೆ. ಗುಡಿಮಸೀದಿಗಳಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳ್ಗಾಮೀ “ಪ್ರವಾದಿ ಸಂದೇಶ ಸಾರ್ವಕಾಲಿಕ ವಾದುದು.ಮನುಷ್ಯ ಸಮಾನತೆಯ ಅತ್ಯುತ್ಕೃಷ್ಟ ಮಾದರಿಯನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಭಾರತೀಯ ಸಮಾಜಕ್ಕೆ ಅವರ ಸಂದೇಶ ಪ್ರಸ್ತುತ ಎಂದರು.
ಪುಸ್ತಕ ಬಿಡುಗಡೆ
ಈ ನಡುವೆ ಪ್ರವಾದಿ ಮುಹಮ್ಮದ್ (ಸ) ಸಮಗ್ರ ವ್ಯಕ್ತಿತ್ವ ಎಂಬ ಕ್ರತಿಯನ್ನು ವೈ. ಎಸ್. ವಿ. ದತ್ತ ಬಿಡುಗಡೆ ಗೊಳಿಸಿ ಕ್ಲಿಫರ್ಡ್ ಫೆರ್ನಾಂಡಿಸ್ ರವರಿಗೆ ಹಸ್ತಾಂತರಿಸಿದರು. ಪ್ರವಾದಿ ಮುಹಮ್ಮದ್ (ಸ) ವಿವಾಹಗಳು ಮತ್ತು ವಿಮರ್ಶೆಗಳು ಎಂಬ ಕ್ರತಿಯನ್ನು ಪದ್ಮಶ್ರೀ ಹರೇಕಳ ಹಾಜಬ್ಬ ರವರು ಬಿಡುಗಡೆಗೊಳಿಸಿ ನಿಕೇತ್ ರಾಜ್ ಮೌರ್ಯ ರಿಗೆ ಹಸ್ತಾಂತರಿಸಿದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ವಿಷಯ ಮಂಡಿಸಿದರು. ಪ್ರಾರಂಭದಲ್ಲಿ ಅಬ್ದುಲ್ ಲತೀಫ್ ಆಲಿಯಾ ಕಿರಾಅತ್ ಪಠಿಸಿದರು. ಜ.ಇ.ದ.ಕ.ಜಿಲ್ಲಾ ಸಂಚಾಲಕ ಆಮೀನ್ ಅಹ್ಸನ್ ಸ್ವಾಗತಿಸಿದರೆ ಅಭಿಯಾನದ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ ಧನ್ಯವಾದವಿತ್ತರು. ಜಮಾಲುದ್ದೀನ್ ಹಿಂದಿ ಮತ್ತು ಲುಬ್ನಾ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.