ಮಂಗಳೂರು: ಆರೋಗ್ಯ ಹಾಗೂ ಸುರಕ್ಷತಾ ಅಭಿಯಾನದ ಅಂಗವಾಗಿ ಸುಯೆಝ್ ಕಂಪೆನಿಯ ಸಿಬಂದಿ ವರ್ಗ ರಕ್ತದಾನ ಶಿಬಿರವನ್ನು ಹಮ್ಮಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಬಿಜೈ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಾಧಿಕಾರಿ ಡಾ. ಜೆ.ಎನ್. ಭಟ್ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ರಕ್ತದಾನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕೆಯುಐಡಿಎಫ್ ಸಿ (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ)ದ ಉಪಯೋಜನಾ ನಿರ್ದೇಶಕರಾದ ಡಿ. ಮಂಜುನಾಥಯ್ಯ, ಸುಯೆಝ್ ಯೋಜನಾ ಪ್ರಬಂಧಕರಾದ ರಮೇಶ್ ಪಾಟೀಲ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರೇಶ್ಮಾ ಉಳ್ಳಾಲ್, ಲಯನ್ಸ್ ಕ್ಲಬ್ ಮಲ್ಲಿಕಟ್ಟೆ ಶಾಖೆಯ ಅಧ್ಯಕ್ಷರಾದ ಗುರುಪ್ರೀತ್, ಬಿಜೈ ಶಾಖೆಯ ಅಧ್ಯಕ್ಷರಾದ ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು.