ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆಯ ಸಂದರ್ಭದಲ್ಲೇ ಸತ್ಯಜಿತ್ ಅಂಗರಕ್ಷಕನನ್ನು ವಾಪಸ್ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ವತಃ ಸತ್ಯಜಿತ್ ಸುರತ್ಕಲ್ ನ್ಯೂಸ್ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ್ದು ಅದರ ವಿವರ ಇಲ್ಲಿದೆ.
ಭದ್ರತೆ ಹಿಂಪಡೆದ ವಿಚಾರದ ಹಿಂದೆ ಬಿಜೆಪಿಯ ಕೆಲ ಮುಖಂಡರ ಕುತಂತ್ರವಿದೆ ಎಂದು ಸತ್ಯಜಿತ್ ಆರೋಪಿಸಿದ್ದಾರೆ. ಮುಂದುವರಿದು ನಿಮಗೆ ಪ್ರಸ್ತುತ ಯಾವುದೇ ಜೀವಬೆದರಿಕೆ ಇಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಈ ಕಾರಣದಿಂದ ಭದ್ರತೆ ಹಿಂಪಡೆಯಲಾಗಿದೆ. ಬೇಕಿದ್ದಲ್ಲಿ ಹಣ ಪಾವತಿಸಿ ಭದ್ರತೆ ಪಡೆಯಬೇಕು ಎಂದು ಪೊಲೀಸರು ಪತ್ರ ಕಳುಹಿಸಿದ್ದರು. ಈ ವಿಚಾರದಲ್ಲಿ ಕಚೇರಿಗೆ ಬರುವಂತೆ ಡಿಸಿಪಿ ಸೂಚನೆ ನೀಡಿದ್ದರು. ಅದರಂತೆ ಮಾ.13ರಂದು ಡಿಸಿಪಿ ಕಚೇರಿಗೆ ತೆರಳಿ ನನಗೆ ಭದ್ರತೆ ಅಗತ್ಯವಿದೆ. ಅಲ್ಲದೆ ಈ ಸಂದರ್ಭದಲ್ಲಿ ಹಣಕೊಟ್ಟು ಭದ್ರತೆ ಪಡೆಯುವಷ್ಟು ಶಕ್ತನಾಗಿಲ್ಲ ಎಂಬ ವಿಚಾರವನ್ನು ಅವರಿಗೆ ತಿಳಿಸಿದ್ದೆ. ಈ ನಿಟ್ಟಿನಲ್ಲಿ ಲಿಖಿತ ಪತ್ರ ನೀಡುವಂತೆ ಪೊಲೀಸರು ತಿಳಿಸಿದ್ದು ಅದರಂತೆ ಪತ್ರ ನೀಡಿದ್ದೇನೆ.
ಅಲ್ಲದೇ ಈ ವಿಚಾರವನ್ನು ಬಿಜೆಪಿ ಪಕ್ಷದ ಪ್ರಮುಖರು, ಸಂಘದ ಹಿರಿಯರಲ್ಲಿ ತಿಳಿಸಿದ್ದೆ. ಆ ವೇಳೆ ಭದ್ರತೆ ಮುಂದವರಿಸುವ ನಿಟ್ಟಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮಾತನಾಡಿದ್ದೇವೆ ಎಂಬ ಭರವಸೆ ದೊರೆತಿತ್ತು. ಆದರೆ ಚುನಾವಣೆ ಘೋಷಣೆ ಬಳಿಕ ಭದ್ರತೆ ಹಿಂಪಡೆದಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕ್ರಮ ಕೈಗೊಂಡಿರುವುದು ಸ್ಪಷ್ಟ. ಈ ಹಿಂದೆಯೇ ಬಿಜೆಪಿಯ ಕೆಲ ಮುಖಂಡರು ಸತ್ಯಜಿತ್ ಸುರತ್ಕಲ್ ರಾಜಕೀಯ ಜೀವನ ಮುಗಿದಿದೆ. ಅವರೊಂದಿಗೆ ಯಾರೂ ಕೂಡ ಇಲ್ಲ ಎಂದು ಹೇಳಿದ್ದರು. ಕಳೆದ 2 ವರ್ಷಗಳಿಂದ ಸಮಾಜದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡ ಬಳಿಕ ಬಿಜೆಪಿಯ ಕೆಲ ಮುಖಂಡರ ಕುತಂತ್ರ ಸಮಾಜದ ಯುವಕರಿಗೆ ತಿಳಿದುಬಂತು.
ಇದೇ ಕಾರಣದಿಂದ ನನ್ನ ಏಳ್ಗೆ ಸಹಿಸದವರು ಇಂತಹ ಕ್ಷುಲ್ಲಕ ಕೆಲಸಕ್ಕೆ ಮುಂದಾಗಿದ್ದಾರೆ. ನಾನು ದೇವರನ್ನು ನಂಬಿದವನು. ಇಂತಹ ವಿಚಾರಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ. ಮುಂದೆ ಕೆಲದಿನಗಳಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಸತ್ಯಜಿತ್ ಸುರತ್ಕಲ್ ನ್ಯೂಸ್ ಕರ್ನಾಟಕ, ನ್ಯೂಸ್ ಕನ್ನಡ ಪ್ರತಿನಿಧಿಗೆ ತಿಳಿಸಿದ್ದಾರೆ.