ಮಂಗಳೂರು: ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್ನಲ್ಲಿ ಪ್ರಕಟಿಸಿದ ಒಂದು ಯೋಜನೆಯೂ ಜಾರಿಗೆ ತರದೆ ಮೀನುಗಾರ ಸಮುದಾಯವನ್ನು ಕಡೆಗಣಿಸಿದೆ. ಈಗಾಗಲೇ ಮೀನುಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.
ನಗರದ ಕಾಂಗ್ರೆಸ್ ‘ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀನುಗಾರರ ಕ್ರಿಯಾ ಸಮಿತಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಮೀನುಗಾರರೊಂದಿಗೆ ಜಿಲ್ಲಾ ಕಾಂಗ್ರೆಸ್ ಸಭೆ ನಡೆಸಿದ್ದು, ಸಮಸ್ಯೆಗಳ ಬಗ್ಗೆ ತಿಳಿದು ಕೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವಾಗಿ ಸಮಗ್ರ ವಿಚಾರ ಮಂಡಿಸುವಂತೆ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ನಲ್ಲಿ ಮಂಜುನಾಥ್ ಭಂಡಾರಿ ಹಾಗೂ ಹರೀಶ್ ಕುಮಾರ್ ಅವರಲ್ಲಿ ಈ ತಿಳಿಸಲಾಗಿದೆ ಎಂದರು.
ನಾಲ್ಕು ತಿಂಗಳಿಂದ ಮೀನುಗಾರರಿಗೆ ಸಬ್ಸಿಡಿ ಸೀಮೆ ಎಣ್ಣೆ ಪೂರೈಕೆಯಾಗುತ್ತಿಲ್ಲ. ಟ್ರಾಲ್ಬೋಟ್ಗಳಿಗೆ ನೀಡುತ್ತಿರುವ ತಿಂಗಳಿಗೆ ೫೦೦ ಲೀ. ಡೀಸೆಲ್ ಪ್ರಮಾಣವನ್ನು ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರೂ ಇಲ್ಲಿ ವರೆಗೆ ಈಡೇರಿಲ್ಲ. ಮೀನುಗಾರಿಕಾ ಬಂದರಿನ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿಲ್ಲ. ಬಂದರು ಪ್ರದೇಶದ ಅಭಿವೃದ್ಧಿ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವಾಗಿತ್ತಾದರೂ ಪ್ರಸ್ತುತ ಬೇರೆಯೇ ಕೆಲಸ ನಡೆಯುತ್ತಿದೆ.
ಬಂದರಿನ ಬೋಟ್ ತಂಗುವ ಸ್ಥಳದಲ್ಲಿ ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿಯಲ್ಲಿದೆ. ಆಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡದೆ ಬೋಟ್ಗಳು ಹಾನಿಗೀಡಾಗುತ್ತಿವೆ. ಮೀನುಗಾರಿಕಾ ಸಚಿವರು ಜಿಲ್ಲೆಯವರೇ ಆದರೂ ಮೀನುಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಂದರಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಕಳೆದ ನಾಲ್ಕು ವರ್ಷದಲ್ಲಿ ಬಂದರಿನ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಕುರಿತು ಶ್ವೇತಪತ್ರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪದ್ಮ ಪ್ರಸಾದ್, ಕೋಡಿಜಾಲ್ ಇಬ್ರಾಹಿಂ, ಶಶಿ‘ರ ಹಗ್ಡೆ, ಶಾಹುಲ್ ಹಮೀದ್, ಶಬೀರ್ ಸಿದ್ದಕಟ್ಟೆ, ಸುಬೋಯದಾಯ ಆಳ್ವ, ಚಿತ್ತರಂಜನ್ ಶೆಟ್ಟಿ, , ಮನೋರಾಜ್, ಪಿ.ಎಂ.ಮುಸ್ತಫಾ, ನಝೀರ್ ಬಜಾಲ್ ಮೊದಲಾದವರಿದ್ದರು.