ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30ಕ್ಕೂ ಹೆಚ್ಚು ಮಂದಿಗೆ ಸುಮಾರು 50 ಲಕ್ಷ ರೂ. ವಂಚಿಸಿದ ಮಂಗಳೂರಿನ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಿಜೈನ ಸುಧೀರ್ ರಾವ್ ವಿ. ಆರ್. ಬಲ್ಗೇರಿಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವರಿಂದ 50 ಲಕ್ಷ ರೂ.ಗೂ ಹೆಚ್ಚು ವಸೂಲಿ ಮಾಡಿದ್ದು, ಹಣ ಪಡೆದಿದ್ದು ಆತ ನಂತರ ವೀಸಾ ಕೊಡಿಸಿಲ್ಲ ಅಲ್ಲದೇ ಹಣವನ್ನು ಹಿಂದಿರುಗಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ಹಲವು ವಂಚನೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಲೆಮರೆಸಿಕೊಂಡಿದ್ದನು. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಸಂಸ್ಥೆಗಳಿಂದ ಸಾಲ ಪಡೆದಿದ್ದು, ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಈತನ ವಿರುದ್ಧ ಮಂಗಳೂರು ಪೂರ್ವ, ಮಂಗಳೂರು ದಕ್ಷಿಣ, ಸುರತ್ಕಲ್ ಮತ್ತು ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಗೆ ವಂಚಿಸಿದ ಆರೋಪದ ಮೇಲೆ ಮೂಡುಬಿದಿರೆ ಠಾಣೆಗಳಲ್ಲಿ ದೂರು ದಾಖಲಾಗಿತ್ತು.