ಮಂಗಳೂರು: “ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ಸಂವಾದಕ್ಕೆ ಚಾಲನೆ ನೀಡುವುದೂ ಸಾಹಿತ್ಯದ ಕೆಲಸವಾಗಿದ್ದು, ರೋಶು, ಬಜ್ಪೆ ತಮ್ಮ ಸಣ್ಣ ಕತೆಗಳ ಮೂಲಕ ಓದುಗನನ್ನು ಸಂವಾದಕ್ಕೆ ಆಹ್ವಾನಿಸುತ್ತಿದಾರೆ. ಸಾಮಾನ್ಯ ಪಾತ್ರಗಳ ಮೂಲಕ ಸಣ್ಣಕತೆಗಳಲ್ಲಿ ಅಸಾಮಾನ್ಯ ಪ್ರಪಂಚವನ್ನು ಕಟ್ಟಿಕೊಡುವ ಅವರ ಶೈಲಿ ಅನನ್ಯವಾಗಿದ್ದು, ಸಂಕಲನದಲ್ಲಿನ ಕೆಲವು ಕತೆಗಳು ಫ್ರಾಂಝ್ ಕಾಫ್ಕಾ ಬರವಣಿಗೆಯನ್ನು ನೆನಪಿಸುತ್ತವೆ” ಎಂದು ಹಿರಿಯ ಪ್ರಾಧ್ಯಾಪಕಿ, ಸಂಶೋಧಕಿ ಮತ್ತು ಲೇಖಕಿ ಪ್ರೊ| ಡೊ| ಜಿತಾ ಲೋಬೊ ಅಭಿಪ್ರಾಯಪಟ್ಟರು.
ಡೊ| ಲೋಬೊ, ನಗರದ ಎಮ್.ಸಿ.ಸಿ. ಬ್ಯಾಂಕಿನ ಫಿ.ಎಫ್. ಎಕ್ಸ್ ಸಭಾಭವನದಲ್ಲಿ ರೋಶು, ಬಜ್ಪೆ ಅವರ ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು ಕಥಾಸಂಕಲನನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಇದರ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಕತೆಗಾರ ರೋಶು, ಬಜ್ಪೆ ಅವರಿಗೆ ಶುಭ ಹಾರೈಸಿದರು.
ಕಿಟಾಳ್ ಪ್ರಕಾಶನ ಸಂಸ್ಥೆಯ ಎಚ್ಚೆಮ್, ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಲೇಖಕ ರೋಶು, ಬಜ್ಪೆ ಅತಿಥಿಗಳನ್ನು ಸ್ವಾಗತಿಸಿದರು.
ರೋಶು, ಬಜ್ಪೆ ಯವರ ತೀಂತ್ ಜಾಲೆಂ ರಗತ್ ಕವನ ಸಂಕಲನಕ್ಕೆ 2018 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕೃತಿ ಪುರಸ್ಕಾರ ಮತ್ತು 2020 ರಲ್ಲಿ ಮಣಿಪಾಲದ ಡೊ| ಟಿ.ಎಮ್. ಎ. ಪೈ ಪೌಂಡೇಶನ್ ಇವರಿಂದ ಪ್ರಶಂಸಾರ್ಹ ಪುಸ್ತಕ ಪುರಸ್ಕಾರ ಲಭಿಸಿರುತ್ತದೆ.
ಕಿಟಾಳ್ ಪ್ರಕಾಶನ ಪ್ರಕಟಿಸಿರುವ ಪೇಯಿಂಗ್ ಗೆಸ್ಟ್ ಮತ್ತು ಇತರ ಕತೆಗಳು ಸಂಗ್ರಹದಲ್ಲಿ ಆಯ್ದ 14 ಕತೆಗಳಿದ್ದು, ಸಂಕಲನಕ್ಕೆ ಖ್ಯಾತ ಕತೆಗಾರ ಕಿಶೂ, ಬಾರ್ಕೂರು ಮುನ್ನುಡಿ ಬರೆದಿರುತ್ತಾರೆ.