ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲು ಹೊಸ ಆದೇಶವನ್ನು ಮರು ಪರಿಶೀಲು ಆದೇಶ ನೀಡಲಾಗಿದೆ ಎಂದು ಮನಪಾ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ಮನಪಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. 2020-23 ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದಿರುವ ದೂರು ಹಾಗೂ ಈ ಬಗ್ಗೆ ಹಿಂದಿನ ಮನಪಾ ಸಭೆಯಲ್ಲಿ ಸದಸ್ಯರು ವಿರೋಧ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಮಾ.20ರಂದು ಮಹಾನಗರ ಪಾಲಿಕೆ ಮೇಯರ್ ಆದೇಶದಲ್ಲಿ ಪರಿಷ್ಕರಣೆ ಮಾಡಲು ಆದೇಶ ನೀಡಲಾಗಿದೆ ಎಂದು ಜಯಾನಂದ ತಿಳಿಸಿದ್ದಾರೆ.
ಆದ್ದರಿಂದ ಈಗಾಗಲೇ ತೆರಿಗೆ ಪಾವತಿಸಿದವರಿಗೆ ಮುಂದಿನ ವರ್ಷ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಮರು ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ ಎಂದು ಜಯಾನಂದ ತಿಳಿಸಿದ್ದಾರೆ. 2021 ರ ಜನವರಿಯಲ್ಲಿ ಈ ಬಗ್ಗೆ ಕಾನೂನು ತಿದ್ದುಪಡಿಯೊಂದಿಗೆ ಆಸ್ತಿ ಮೌಲ್ಯದ ಮೇಲೆ ಆಯಾ ಪ್ರದೇಶದಲ್ಲಿ ಮಾರುಕಟ್ಟೆ ಮೌಲ್ಯ, ಮೂಲ ಸೌಕರ್ಯಗಳ ಅಭಿವೃದ್ಧಿ ಯನ್ನು ಪರಿಗಣಿಸಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದು 50ರಿಂದ ಶೇ.60ರವರೆಗೆ ಕೆಲವು ಪ್ರದೇಶದಲ್ಲಿ ಹೆಚ್ಚಳ ಆಗಿರುವುದು ಸಾರ್ವಜನಿಕ ರಿಗೆ ಹೊರೆಯಾಗಿದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹೊರೆ ಯಾಗದಂತೆ ತೆರಿಗೆ ಪರಿಷ್ಕರಣೆ ಯನ್ನು ಮಾಡಲು ಆದೇಶಿಸಲಾಗಿದೆ ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಸದಸ್ಯರಾದ ಶಕಿಲಾ ಕಾವ, ಹೇಮಲತಾ ರಘು ಸಾಲ್ಯಾನ್, ಕಿಶೋರ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.