ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಪ್ರಗತಿನಗರ ಪರಿಸರದಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಇಂದು ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರಗತಿನಗರ ಅಸೋಸಿಯೇಶನ್ ಅಧ್ಯಕ್ಷರು ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗಬಾರದು. ನೀರು ಸರಾಗವಾಗಿ ಹರಿದುಹೋಗಬೇಕು. ಅದಕ್ಕಾಗಿ ಸುಸಜ್ಜಿತವಾದ ಮಳೆನೀರ ಚರಂಡಿಯ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ತಾರತಮ್ಯವಿಲ್ಲ. ಮಂಗಳೂರು ನಗರಕ್ಕೆ ಎಲ್ಲ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ. 2023ರ ಅಂತ್ಯದೊಳಗೆ ಮಂಗಳೂರು ದೇಶದಲ್ಲೇ ಮಾದರಿ ನಗರವಾಗಿ ಅಭಿವೃದ್ಧಿ ಹೊಂದಬೇಕೆಂಬ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಕಾಮತ್ ನುಡಿದರು.
ಇದಲ್ಲದೆ, ಮಾ.5ಕ್ಕೆ ಸಂಜೆ 5:30 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಹತ್ವಾಕಾಂಕ್ಷೆಯ 500 ಕೋಟಿ ರೂ ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಲಿದೆ. ನೇತ್ರಾವತಿ ನದಿ ಪರಿಸರದಿಂದ ತೊಡಗಿ ಸುಲ್ತಾನ್ ಬತ್ತೇರಿ ವರೆಗೆ ಹಲವು ಕಾಮಗಾರಿಗಳು ಈ ಅನುದಾನದಲ್ಲಿ ನಡೆಯಲಿವೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ ಬಜಾಲ್, ಮುಕುಂದ ನಾಯಕ್, ಜಯ ಬಜಾಲ್, ಸುಮತಿ, ಹರೀಶ್, ರಾಮ್ ಎಕ್ಕೂರು, ರವಿ ಕುತ್ತಾರ್, ಮನೀಷ್ ಚೌಟ, ಭರತ್ ರಾಜ್ ಶೆಟ್ಟಿ, ಕೃಷ್ಣ ಬಂಗೇರ, ಸುಕೇಶ್ ಅಳಪೆ, ರಾಜೇಶ್ ಎಕ್ಕೂರು, ಸುಜಾತ ಕೊಟ್ಟಾರಿ, ವೀಣಾ ರೈ, ಯಶೋದಾ ಗಟ್ಟಿ, ಮಾನಸ ರೈ, ವಿಜಯ, ಪೂರ್ಣಿಮಾ, ಹೇಮಪ್ರಕಾಶ್, ಆರತಿ ಆಳ್ವ, ಲಲಿತಾ ರಾವ್, ಲೋಕೇಶ್ ಕುತ್ತಡ್ಕ ಮುಂತಾದವರು ಉಪಸ್ಥಿತರಿದ್ದರು.