ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ತನ್ನ ಹೆಸರಿನ ಜೊತೆಗೆ ಇರುವ ಕಟೀಲ್ ಜಾಗದ ಹೆಸರನ್ನು ತೆಗೆದು ಹಾಕಲಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಬಿ ರಮಾನಾಥ ರೈ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ನು ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಹೆಸರಿನ ಮುಂದಿನಿಂದ ಕಟೀಲು ಹೆಸರು ತೆಗೆದುಹಾಕಬೇಕು. ಯಾಕೆಂದರೆ ಕಟೀಲು ಎಂದ ತಕ್ಷಣ ನಮಗೆ ತುಳುನಾಡಿನ ಪವಿತ್ರವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೆನಪು ಆಗುತ್ತಿದೆ.
ಕಟೀಲು ಪರಮಪುಣ್ಯ ಕ್ಷೇತ್ರವಾಗಿದೆ. ಆದರೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಮ್ಮ ಅಸಭ್ಯ ಹೇಳಿಕೆಗಳಿಂದ, ನಡವಳಿಕೆಗಳಿಂದ ಕಟೀಲು ಕ್ಷೇತ್ರಕ್ಕೆ ಅವಹೇಳನ ಮಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಹೇಳುವುದು ಬಿಟ್ಟು, ಲವ್ ಜಿಹಾದ್ನಂತಹ ಕೋಮುಭಾವನೆಗಳ ವಿಚಾರ ಮುಂದಿಟ್ಟುಕೊಂಡು ಮತಯಾಚನೆ ಮಾಡಿ ಎಂದು ಕಾರ್ಯಕರ್ತರಿಗೆಕರೆ ನೀಡುತ್ತಿದ್ದಾರೆ.
ಈ ಮೂಲಕ ಸಾಮರಸ್ಯ ಕೆಡಲು ಕಾರಣರಾಗುತ್ತಿದ್ದಾರೆ. ಅವರ ಹೇಳಿಕೆಗಳಿಂದ ಪವಿತ್ರ ಕ್ಷೇತ್ರಕ್ಕೆ ಕೆಟ್ಟ ಹೆಸರಲ್ಲವೇ ಎಂದು ಪ್ರಶ್ನಿಸಿದ ರೈ ತನ್ನ ಹೆಸರಿನಿಂದ ಕಟೀಲ್ ತೆಗೆದು ಹಾಕಲಿ ಎಂದು ಆಗ್ರಹಿಸಿದ್ದಾರೆ.