ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಅಳಪೆ ದಕ್ಷಿಣ ವಾರ್ಡಿನ ಮಾನಲ್ ಕೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್,ಬಹು ಮುಖ್ಯ ಬೇಡಿಕೆಯಾಗಿದ್ದ ಮಾನಲ್ ಕೋಡಿ ರಸ್ತೆ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಹಲವಾರು ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಯ ಬೇಡಿಕೆಯಿತ್ತು. ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಹೇಳಿದರು.
ಮಾನಲಕೋಡಿ ರಸ್ತೆ ಅಗಲೀಕರಣ ಸಂಬಂಧ ಕಗ್ಗಂಟಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದ್ದು ಜಾಗದ ಮಾಲಕರು ಅಗಲೀಕರಣಕ್ಕೆ ಸಹಕಾರ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅಭಿವೃದ್ಧಿಗೆ ಜನರ ಸಹಕಾರ, ಸ್ಪಂದನೆ ದೊರೆತರೆ ಕಾಮಗಾರಿ ಪೂರ್ಣಗೊಳಿಸಲು ಸಹಕಾರವಾಗುತ್ತದೆ. ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಶೋಭಾ ಪೂಜಾರಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ, ಭರತ್ ರಾಜ್ ಶೆಟ್ಟಿ, ಸುಕೇಶ್ ಕುಮಾರ್, ಮಾಧವ, ಸೀತಾರಾಮ್ ಭಟ್, ಸವಿತಾ, ಆಶಾ, ಸರಿತಾ, ಆಶಾ, ದೇವಣ್ಣ, ಜಯಣ್ಣ, ದಯಾನಂದ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಪರಿಸರದ ನಾಗರಿಕರು ಉಪಸ್ಥಿತರಿದ್ದರು.